ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಅರವಿಂದ್ ಕೇಜ್ರಿವಾಲ್ ಅವರನ್ನು 6 ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಿದೆ.
ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸಬೇಕಿರುವ ಕಾರಣ 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಇಡಿ ಕೋರ್ಟ್ಗೆ ಮನವಿ ಮಾಡಿತ್ತು. ಈ ಕುರಿತಾಗಿ ಶುಕ್ರವಾರ ಇಡೀ ದಿನ ವಿಚಾರಣೆ ನಡೆಸಿದ ಕೋರ್ಟ್ ಕೊನೆಗೆ ಮಾರ್ಚ್ 28ರವರೆಗೆ ಕಸ್ಟಡಿಗೆ ನೀಡಲು ಒಪ್ಪಿಕೊಂಡಿದೆ.
ಏಜೆನ್ಸಿ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು 10 ದಿನಗಳ ಕಸ್ಟಡಿಗೆ ಕೋರಿದ್ದರು. ಅರವಿಂದ್ ಕೇಜ್ರಿವಾಲ್ ದೆಹಲಿ ಅಬಕಾರಿ ಹಗರಣದ “ಕಿಂಗ್ಪಿನ್” ಆಗಿದ್ದಾರೆ ಮತ್ತು ಇದು ಒಟ್ಟು 100 ಕೋಟಿ ರೂಪಾಯಿ ಮೊತ್ತದ ಹಗರಣವಾಗಿದೆ. ಗುರುವಾರ ರಾತ್ರಿ ಹುಡುಕಾಟದ ವೇಳೆಯೂ ಕೇಜ್ರಿವಾಲ್ ಸರಿಯಾದ ಮಾಹಿತಿಗಳನ್ನು ಅವರು ನೀಡಿಲ್ಲ ಎಂದು ಆರೋಪಿಸಲಾಗಿದೆ. ಅವರನ್ನು ವಿಚಾರಣೆ ಮಾಡುವ ಅಗತ್ಯವಿದೆ. ಹಣದ ಹಾದಿಯ ಬಗ್ಗೆ ತನಿಖೆ ಮಾಡಬೇಕಾಗಿದ್ದು, ಇದು ರಿಮಾಂಡ್ಗೆ ನೀಡಲು ಸೂಕ್ತವಾದ ಪ್ರಕರಣವಾಗಿದೆ ಎಂದು ವಾದಿಸಿದ್ದರು.