ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಮತ್ತೆ ಇಡಿ ಸಂಕಷ್ಟ ಎದುರಾಗಿದ್ದು ದೆಹಲಿ ವಿಶೇಷ ನ್ಯಾಯಾಲಯದಲ್ಲಿ ಛಾರ್ಜ್ ಶೀಟ್ ಸಲ್ಲಿಸಲಾಗಿದೆ.
ಅಕ್ರಮ ಹಣವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರ ಎದುರಲ್ಲಿ ಜಾರಿ ನಿರ್ದೇಶನಾಲಯ ಗುರುವಾರ ಚಾರ್ಜ್ ಶೀಟ್ ಸಲ್ಲಿಸಿದೆ.
ಆದಾಯ ತೆರಿಗೆ (ಐಟಿ) ಇಲಾಖೆ ನೀಡಿದ ದೂರಿನ ಆಧಾರದ ಮೇಲೆ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 3, 2019 ರಂದು ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿತ್ತು. ಆದರೆ ದೆಹಲಿ ಹೈಕೋರ್ಟ್ 2019 ರ ಅಕ್ಟೋಬರ್ನಲ್ಲಿ ಅವರಿಗೆ ಜಾಮೀನು ನೀಡಿತ್ತು. ಅವರೀಗ ಸದ್ಯ ಜಾಮೀನಿನ ಮೇಲಿದ್ದಾರೆ.
2017ರಲ್ಲಿ ಡಿಕೆಶಿಯವರ ಬೆಂಗಳೂರು ನಿವಾಸದಲ್ಲಿ ಪತ್ತೆಯಾದ 2.5ಕೋಟಿ ಸೇರಿದಂತೆ ಒಟ್ಟೂ 10 ಕೋಟಿ ಹಣವನ್ನು ಇಡಿ ವಶಪಡಿಸಿಕೊಂಡಿತ್ತು. ಆಗಸ್ಟ್ 3, 2017 ರಂದು, ಶಿವಕುಮಾರ್ ಅವರ ನಿವಾಸ ಮತ್ತು 44 ಕಾಂಗ್ರೆಸ್ ಗುಜರಾತ್ ಶಾಸಕರು ತಂಗಿದ್ದ ಈಗಲ್ಟನ್ ಗಾಲ್ಫ್ ರೆಸಾರ್ಟ್ನಲ್ಲಿ ಐಟಿ ದಾಳಿ ನಡೆಸಿತು. ಆಗ ಬೆಂಗಳೂರಿನಲ್ಲಿ ತಂಗಿದ್ದ ಗುಜರಾತ್ನ ಎಲ್ಲ ಕಾಂಗ್ರೆಸ್ ಶಾಸಕರಿಗೆ ಶಿವಕುಮಾರ್ ಆತಿಥ್ಯದ ಉಸ್ತುವಾರಿ ವಹಿಸಿದ್ದರು.