ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ವಾಗತಿಸಿದ್ದಾರೆ. ಇದು ಐತಿಹಾಸಿಕ ತೀರ್ಪಾಗಿದೆ. ನ್ಯಾಯಾಲಯದ ತೀರ್ಪು ಏನೇ ಆಗಿದ್ದರೂ ನಾವು ಗೌರವಿಸುತ್ತೇವೆ ಎಂದು ಹಿಂದೆಯೇ ಹೇಳಿದ್ದೆವು. ಹೈಕೋರ್ಟ್ ತೀರ್ಪಿಗೆ ನಾವು ಬದ್ಧರಾಗಿದ್ದೇವೆ. ವಸ್ತ್ರಸಂಹಿತೆಗೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೂ ನ್ಯಾಯಾಲಯ ತನ್ನ ತೀರ್ಪಿನ ಮೂಲಕ ಉತ್ತರ ನೀಡಿದೆ. ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಇನ್ನು ಮುಂದೆ ಹೈಕೋರ್ಟ್ ತೀರ್ಪನ್ನು ಪಾಲನೆ ಮಾಡಬೇಕು. ವಿವಾದದ ಕಾರಣದಿಂದ ಶಾಲೆ-ಕಾಲೇಜುಗಳಿಂದ ಹೊರಗುಳಿದಿರುವ ವಿದ್ಯಾರ್ಥಿಗಳು ಮತ್ತೆ ಶಿಕ್ಷಣ ಸಂಸ್ಥೆಗಳಿಗೆ ಹಾಜರಾಗಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯತೆ ಜಾಗೃತಗೊಳಿಸುವಲ್ಲಿ ಸಮವಸ್ತ್ರ ಬಹುಮುಖ್ಯವಾದುದು. ನಾವೆಲ್ಲರೂ ಭಾರತೀಯರು. ಕೆಲವೊಂದು ಗೊಂದಲಗಳಿಂದ ವಿವಾದ ಸೃಷ್ಟಿಯಾಗಿದೆ. ಈ ತೀರ್ಪನ್ನು ಆಧರಿಸಿ ಶಿಕ್ಷಣ ಕಾಯ್ದೆಯಲ್ಲಿ ಇರುವ ಕೆಲ ಗೊಂದಲಗಳನ್ನು ಸರಿಪಡಿಸುತ್ತೇವೆ ಎಂದು ಹೇಳಿದರು. ರಾಜ್ಯದಲ್ಲಿ ಸುಮಾರು 86 ಸಾವಿರ ಪಿಯು ವಿದ್ಯಾರ್ಥಿನಿದ್ದಾರೆ. ಈ ಪೈಕಿ 6 ಮಕ್ಕಳು ಮಾತ್ರ ಹಿಜಾಬ್ ಅನುಮತಿಗೆ ಒತ್ತಾಯಿಸಿದ್ದರು. ಶೇ 99.9ರಷ್ಟು ವಿದ್ಯಾರ್ಥಿನಿಯರು ಸಮವಸ್ತ್ರ ನೀತಿಯನ್ನು ಅನುಸರಿಸಿದ್ದಾರೆ. ತೀರ್ಪಿನ ನಂತರ ಗೊಂದಲಗಳು ಬಗೆಹರಿಯಲಿದೆ. ಜನರು ಸಹ ನ್ಯಾಯಾಲಯದ ತೀರ್ಪನ್ನು ಒಪ್ಪಿದ್ದಾರೆ. ಶಿಕ್ಷಣ ಸಂಸ್ಥೆಗಳಿಂದ ಹೊರಗುಳಿದ ವಿದ್ಯಾರ್ಥಿಗಳು ಶಾಲಾಕಾಲೇಜಿಗೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ