ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೀಕರ ಪ್ರವಾಹದಿಂದ ತತ್ತರಿಸಿರುವ ನೇಪಾಳದಲ್ಲಿ ನಮ್ಮ ರಾಜ್ಯದ ಎಂಟು ಮಂದಿ ಅಲ್ಲಿ ಸಿಲುಕಿದ್ದಾರೆ ಎಂದು ಡಿಸಿಎಂ ಜಿ. ಪರಮೇಶ್ವರ ಮಾಹಿತಿ ನೀಡಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿ, ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ನಮ್ಮ ರಾಜ್ಯದ ಎಂಟು ಮಂದಿ ಅಲ್ಲಿ ಸಿಲುಕಿದ್ದಾರೆ. ಅವರು ಯಾವ ಪರಿಸ್ಥಿತಿಯಲ್ಲಿದ್ದಾರೆ ಎನ್ನುವ ಮಾಹಿತಿಯನ್ನು ಕಲೆಹಾಕುತ್ತಿದ್ದೇವೆ. ಈಗ ತಿಳಿದಿರುವ ಪ್ರಕಾರ ಅವರೆಲ್ಲರೂ ಬೆಂಗಳೂರಿನವರು. ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ. ನಮ್ಮ ಅಧಿಕಾರಿಗಳು ನೇಪಾಳದ ರಾಜಧಾನಿಗೆ ತೆರಳಲಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಜನರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಅವರ ಕುಟುಂಬದವರೂ ಇಲ್ಲಿ ಕಾಯ್ತಿದ್ದಾರೆ. ನೇಪಾಳದಲ್ಲಿರುವ ಕನ್ನಡಿಗರು ಭಯ ಪಡುವ ಅಗತ್ಯ ಇಲ್ಲ. ಆದಷ್ಟು ಬೇಗ ಮಾಹಿತಿಯನ್ನು ಕಲೆ ಹಾಕಿ ವಾಪಾಸ್ ಕರೆಸಿಕೊಳ್ಳುತ್ತೇವೆ. ನೇಪಾಳದಲ್ಲಿ ಸಿಲುಕಿರುವ ಕರ್ನಾಟಕದ ಜನರಿಗಾಗಿ ಸರ್ಕಾರ ಈಗಾಗಲೇ ಟೋಲ್ ಫ್ರೀ ಸಹಾಯವಾಣಿ ಆರಂಭಿಸಿದೆ ಎಂದಿದ್ದಾರೆ.
ನಿಖರ ಮಾಹಿತಿಯೇ ಸಿಗ್ತಾ ಇಲ್ಲ: ಸಿಎಂ ಡಿಕೆಶಿ
ನೇಪಾಳದಲ್ಲಿ ನಮ್ಮ ಬೆಂಗಳೂರಿನವರು ಸಿಲುಕಿಂಡಿದ್ದಾರೆ ಎನ್ನುವ ಮಾಹಿತಿಯಷ್ಟೇ ಲಭ್ಯವಾಗಿದೆ. ಇನ್ನು ನಿಖರ ಮಾಹಿತಿ ಲಭ್ಯವಾಗಿಲ್ಲ. ಎಲ್ಲರನ್ನೂ ಪತ್ತೆ ಹಚ್ಚಿ ವಾಪಾಸ್ ಕರೆತರುತತ್ತೇವೆ. ಅವಶ್ಯಕತೆ ಬಿದ್ದರೆ ಮಂತ್ರಿಗಳನ್ನು ಕಠ್ಮಂಡುಗೆ ಕಳುಹಿಸುತ್ತೇವೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಪ್ರವಾಹ ಸಂಭವಿಸಿದ್ದು ಹೇಗೆ?
ನೇಪಾಳದಲ್ಲಿ ಬುಧವಾರ ಹಠಾತ್ ಹಿಮನದಿ ಕರಗಿ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಭೀಕರ ಪರಿಸ್ಥಿತಿ ಉಂಟಾಗಿದೆ. ಲೆಂಡೆ ಖೋಲಾ ನದಿಯು ಚೀನಾದಿಂದ ನೇಪಾಳಕ್ಕೆ ಹರಿಯುವ ಭೋಟೆ ಕೋಶಿ ನದಿಯ ಉಪನದಿಯಾಗಿದೆ. ಈ ನದಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದಾಗಿ ಅತ್ಯಂತ ಪ್ರಬಲವಾದ ಭೂಕುಸಿತ ಸಂಭವಿಸಿದೆ. ಪ್ರವಾಹದಲ್ಲಿ 177 ಮಂದಿ ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.



