ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಚ ರಾಜ್ಯಗಳ ಚುನಾವಣೆ ಶಾಂತಿಯುತವಾಗಿ ನಡೆದು, ನಾಳೆ ( ಮೇ 4) ಬೆಳಿಗ್ಗೆಯಿಂದ ಮತ ಎಣಿಕೆ ಪ್ರಾರಂಭವಾಗಲಿದ್ದು, ಇಡೀ ದೇಶವಾಸಿಗಳ ಚಿತ್ತ ಫಲಿತಾಂಶದ ಮೇಲೆ ನೆಟ್ಟಿದೆ.
ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಕೇಂದ್ರಾಡಳಿತ ಪ್ರದೇಶ ಪುದಚೇರಿಯ ಚುನಾವಣಾ ಫಲಿತಾಂಶ ನಾಳೆ ಹೊರಬೀಳಲಿದ್ದು, ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಈಗಾಗಲೇ ಪಂಚ ರಾಜ್ಯಗಳ ಚುನಾವಣೆ ಕುರಿತು ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ದೇಶಾದ್ಯಂತ ಚರ್ಚೆಗಳು ಆರಂಭವಾಗಿವೆ. ಇದೀಗ ನಾಳೆ ಈ ಎಲ್ಲಾ ಚರ್ಚೆಗಳಿಗೆ ಫಲಿತಾಂಶ ಉತ್ತರ ನೀಡಲಿದೆ.
ಒಂದೆಡೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಧಿಕಾರಕ್ಕೆ ಬರಲಿದೆ ಎಂಬ ಮಾತುಕಲು ಕೇಳಿಬರುತ್ತಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ಟಿಎಂಸಿ ಕೂಡ ಗೆಲುವಿನ ವಿಶ್ವಾಸದಲ್ಲಿದೆ.
ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿದ್ದರೆ, ದಳಪತಿ ವಿಜಯ್ ಟಿವಿಕೆ ಪಕ್ಷ ಖಾತೆ ತೆರೆಯುವ ಭರವಸೆ ವ್ಯಕ್ತಪಡಿಸಿದೆ.
ಇನ್ನು ಅಸ್ಸಾಂನಲ್ಲಿ ಮುಖ್ಯಮಂತ್ರಿ ಹೀಮಂತ ಬಿಸ್ವಾ ಶರ್ಮಾ ನೇತೃತ್ವದ ಎನ್ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹುಮ್ಮಸ್ಸಿನಲ್ಲಿದೆ. ಪುಚುಚೇರಿಯಲ್ಲಿ AINRC ಮರಳಿ ಅಧಿಕಾರಕ್ಕೆ ಬರುವ ಭರವಸೆಯಲ್ಲಿದೆ.
ಇತ್ತ ಕೇರಳದಲ್ಲಿ ಎಲ್ಡಿಎಫ್ ಮೈತ್ರಿಕೂಟ ಈ ಬಾರಿ ಅಧಿಕಾರ ಕಳೆದುಕೊಂಡು ಹೀನಾಯ ಸೋಲಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ಗೆ ಅಧಿಕಾರ ದೊರೆಯಲಿದೆ ಎಂದು ಎಕ್ಸಿಟ್ ಪೋಲ್ಗಳು ಭವಿಷ್ಯ ನುಡಿದಿವೆ.
ಹೀಗಾಗಿ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವು ನಾಳೆ ಹೊಸ ರಾಜಕೀಯ ಬದಲಾವಣೆಯ ಗಾಳಿ ಬೀಸಲಿದ್ದು, ಮತದಾರರ ಆಶೀರ್ವಾದ ಯಾರ ಮೇಲಿದೆ ಎಂಬುದು ಕಾದುನೋಡಬೇಕಿದೆ.



