ಹೊಸದಿಗಂತ ವರದಿ ಮಡಿಕೇರಿ:
ಹೆದ್ದಾರಿ ಬದಿಯ ಖಾಲಿ ಸ್ಥಳದಲ್ಲಿ ನಿಲ್ಲಿಸಿದ್ದ ಕಾರೊಂದನ್ನು ಕಾಡಾನೆಯೊಂದು ಹೆದ್ದಾರಿಗೆ ತಂದು ನಿಲ್ಲಿಸಿರುವ ಘಟನೆ ಸುಂಟಿಕೊಪ್ಪ ಸಮಿಪದ ಏಳನೇ ಹೊಸಕೋಟೆಯ ಮೆಟ್ನಳ್ಳದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.
ಏಳನೇ ಹೊಸಕೋಟೆಯ ಮೆಟ್ನಳ್ಳದ ಹೆದ್ದಾರಿ ಬದಿಯ ಖಾಲಿ ಜಾಗದಲ್ಲಿ ಅಲ್ಲಿನ ನಿವಾಸಿಗಳಾದ ಸಾನಿಪು ಹಾಗೂ ಶೇಖರ್ ಎಂಬವರುಗಳು ಸ್ವಿಫ್ಟ್ ಮತ್ತು ಸ್ಯಾಂಟ್ರೋ ಕಾರುಗಳನ್ನು ನಿಲ್ಲಿಸಿದ್ದರು.
ಶನಿವಾರ ಬೆಳಗಿನ ಜಾವ 4.30ರ ಸುಮಾರಿಗೆ ಆ ಮಾರ್ಗವಾಗಿ ಬಂದ ಕಾಡಾನೆ ಮೊದಲು ಸ್ಯಾಂಟ್ರೋ ಕಾರಿನ ಮೇಲೆ ಎರಗಿದೆ. ನಂತರ ಸಾನಿಪು ಅವರಿಗೆ ಸೇರಿದ ಸ್ವಿಫ್ಟ್ ಕಾರಿನ ಮೇಲೆ ದಾಳಿ ಮಾಡಿ ಹೆದ್ದಾರಿವರೆಗೆ ತಳ್ಳಿಕೊಂಡು ಬಂದಿದೆ. ಬಳಿಕ ಕಾರನ್ನು ಅಲ್ಲಿಯೇ ಬಿಟ್ಟ ಕಾಡಾನೆ ಅಲ್ಲಿಂದ ಪರಾರಿಯಾಗಿದೆ.ಕಾರುಗಳಿಗೆ ಸಣ್ಣಪುಟ್ಟ ಹಾನಿಯಾಗಿದ್ದು, ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.