ಹೊಸದಿಗಂತ ಡಿಜಿಟಲ್ ಡೆಸ್ಕ್:
ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಹುಟ್ಟಡಗಿಸಲು ಪಣ ತೊಟ್ಟಿವೆ. ಕಾಶ್ಮೀರದಲ್ಲಿ ಸತತ ಮೂರನೇ ದಿನವೂ ಎನ್ಕೌಂಟರ್ ನಡೆದಿದ್ದು, ಇಂದು ಮತ್ತೆ ಮೂವರು ಹತರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ರಾಜೌರಿ ಜಿಲ್ಲೆಯಲ್ಲಿ ಎನ್ಕೌಂಟರ್ ಆರಂಭವಾಗಿದ್ದು, ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯುತ್ತಿದ್ದು, ಈವರೆಗೆ ಬಂದಿರುವ ಮಾಹಿತಿ ಪ್ರಕಾರ ಭದ್ರತಾ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.
ಕಾಶ್ಮೀರದಲ್ಲಿ ಬುಧವಾರದಿಂದ ಎನ್ಕೌಂಟರ್ಗಳು ನಡೆಯುತ್ತಿವೆ. ಇಂದಿನ ಘಟನೆ ರಾಜೌರಿ ಜಿಲ್ಲೆಯ ಕಂಡಿ ಗ್ರಾಮದ ಕೇಸರಿ ಪ್ರದೇಶದಲ್ಲಿ ನಡೆದಿದೆ. ಭಯೋತ್ಪಾದಕರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರಿದಿವೆ. ಇದರೊಂದಿಗೆ ಅಡಗಿಕೊಂಡಿದ್ದ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಗುಂಡಿನ ಚಕಮಕಿ ಆರಂಭವಾಗಿದೆ.
ಗುರುವಾರ ಮುಂಜಾನೆ, ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದರು. ಮೃತ ಉಗ್ರರನ್ನು ಸ್ಥಳೀಯರು ಎಂದು ಗುರುತಿಸಲಾಗಿದೆ. ಇವರಿಬ್ಬರೂ ನಿಷೇಧಿತ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದರು. ಶೋಪಿಯಾನ್ ಜಿಲ್ಲೆಯ ಶಾಕಿರ್ ಮಜೀದ್ ನಜರ್ ಮತ್ತು ಹನನ್ ಅಹ್ಮದ್ ಎಂದು ಗುರುತಿಸಲಾಗಿದೆ. ಇಬ್ಬರೂ 2023ರಲ್ಲಿ ಭಯೋತ್ಪಾದನೆಗೆ ಸೇರಿದ್ದರು. ಬುಧವಾರ ಕುಪ್ವಾರದ ಪಿಚ್ನಾಡ್ ಮಚಿಲ್ ಸೆಕ್ಟರ್ ಬಳಿ ನುಸುಳಲು ಯತ್ನಿಸಿದ ಇಬ್ಬರು ಭಯೋತ್ಪಾದಕರನ್ನು ಸೇನೆ ಮತ್ತು ಕಾಶ್ಮೀರ ಪೊಲೀಸರು ಹತ್ಯೆ ಮಾಡಿದ್ದಾರೆ.