ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗದ ಕೊಡಚಾದ್ರಿ ಬೆಟ್ಟಕ್ಕೆ ತೆರಳುವ ಪ್ರವಾಸಿಗರಿಗೆ ಗುಡ್ ನ್ಯೂಸ್ ಇಲ್ಲಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಈ ಹಿಂದೆ ವಿಧಿಸಿದ್ದ ಪ್ರವೇಶ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.
ಪ್ರವಾಸಿಗರ ಒತ್ತಡಕ್ಕೆ ಮಣಿದು ವನ್ಯಜೀವಿ ಇಲಾಖೆ, ಈ ನಿರ್ಧಾರ ಕೈಗೊಂಡಿದ್ದು, ಭಾನುವಾರದಿಂದಲೇ ಕೊಡಚಾದ್ರಿ ಬೆಟ್ಟ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ವಾಹನದಲ್ಲಿ ಮಾತ್ರ ತೆರಳಲು ಅವಕಾಶ ನೀಡಲಾಗಿದ್ದು, ಜೀಪ್ ಪ್ರವೇಶಕ್ಕೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
ಕೊಡಚಾದ್ರಿ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲದ ಕಾರಣ ಜೀಪ್ ಮಾಲೀಕರು ಹಾಗೂ ಪ್ರವಾಸಿಗರು ಮುಚ್ಚಳಿಕೆ ಬರೆದು ಕೊಡಬೇಕಾಗಿದ್ದು, ಯಾವುದೇ ರೀತಿಯ ತೊಂದರೆಗಳು ಎದುರಾದರೆ ಅದಕ್ಕೆ ನಾವೇ ಜವಾಬ್ದಾರರು ಎಂದು ಇದರಲ್ಲಿ ನಮೂದಿಸಬೇಕಾಗುತ್ತದೆ. ಅಲ್ಲದೆ ಜೀಪ್ ನಲ್ಲಿ ಮಾತ್ರ ತೆರಳಲು ಅವಕಾಶ ನೀಡಲಾಗಿದ್ದು, ಚಾರಣಕ್ಕೆ ಅವಕಾಶ ಇರುವುದಿಲ್ಲ.