ಹೊಸ ದಿಗಂತ ವರದಿ, ಕಾಸರಗೋಡು:
2021-22ನೇ ಶೈಕ್ಷಣಿಕ ವರ್ಷದ ಕೇರಳ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶವನ್ನು ರಾಜ್ಯ ಶಿಕ್ಷಣ ಖಾತೆ ಸಚಿವ ವಿ.ಶಿವನ್ ಕುಟ್ಟಿ ತಿರುವನಂತಪುರದಲ್ಲಿ ಬುಧವಾರ ಅಪರಾಹ್ನ ಪ್ರಕಟಿಸಿದರು. ಅದರಂತೆ ಕೇರಳದಲ್ಲಿ ಶೇಕಡಾ 99.26ರಷ್ಟು ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ರಾಜ್ಯದಾದ್ಯಂತ 2961 ಕೇಂದ್ರಗಳಲ್ಲಾಗಿ ಒಟ್ಟು 4,26,469 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 4,23,303 ಮಂದಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆದಿದ್ದಾರೆ. 44,363 ಮಂದಿ ಮಕ್ಕಳು ಎ ಪ್ಲಸ್ ಗ್ರೇಡ್ ಗಳಿಸಿದ್ದಾರೆ. ಕಣ್ಣೂರು ಜಿಲ್ಲೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾದರು.
ಕಳೆದ ವರ್ಷ ಶೇಕಡಾ 99.46ರಷ್ಟು ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು. ಕೋವಿಡ್ ಮಾಹಾಮಾರಿಯ ಸಂದರ್ಭದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಅದಕ್ಕಾಗಿ ಶ್ರಮಿಸಿದ ಶಿಕ್ಷಕರನ್ನು ಸಚಿವರು ಪ್ರಶಂಸಿಸಿದರು. ಶಿಕ್ಷಣ ಇಲಾಖೆಯ ಎಲ್ಲಾ ವೆಬ್ ಸೈಟ್ ಗಳಲ್ಲಿ ಫಲಿತಾಂಶ ಲಭ್ಯವಿದೆ.