ಹೊಸದಿಗಂತ ಡಿಜಿಟಲ್ ಡೆಸ್ಕ್:
ವೇದಾಧಾರಿತ ಶಿಕ್ಷಣ ಮಂಡಳಿಗಳನ್ನು ಗುರುತಿಸಲು ಕೇಂದ್ರ ಶಿಕ್ಷಣ ಸಚಿವಾಲಯವು ನಿರ್ಧರಿಸಿದೆ. ಈ ಪ್ರಕ್ರಿಯೆಯಲ್ಲಿ ಸಂಸ್ಕೃತ ಭಾಷೆ ಮತ್ತು ಗಣಿತ ಪರಿಣಿತರು ಭಾಗವಹಿಸಲಿದ್ದಾರೆ.
ಪ್ರಸುತ್ತ ವೈದಿಕ ಶಿಕ್ಷಣದ ಕುರಿತು ಯಾವುದೇ ಪದವಿ ಹಂತದ ಕೋರ್ಸ್ ಇಲ್ಲದಿದ್ದರೂ, ವಿದ್ಯಾರ್ಥಿಗಳಿಗೆ ವೇದ ಶಿಕ್ಷಣ ಮತ್ತು ವೇದಾಧಾರಿತ ಜ್ಞಾನವನ್ನು ಒದಗಿಸಲು ಸಚಿವಾಲಯ ನಿರ್ಧರಿಸಿದೆ.ಈ ಹಿನ್ನೆಲೆಯಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆಯೊಂದಿಗೆ ವೇದ ಪದ್ಧತಿಯನ್ನು ಜೋಡಿಸಲು ಸರ್ಕಾರ ಚಿಂತನೆ ನಡೆಸಿದೆ. ಅದಕ್ಕಾಗಿ ಶಿಕ್ಷಣ ಮಂಡಳಿ ಸ್ಥಾಪನೆ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ.
ಸಚಿವಾಲಯದ ಪ್ರಕಾರ, ವೇದಗಳನ್ನು ವಿದ್ಯಾರ್ಥಿವೇತನದೊಂದಿಗೆ ಸಾರ್ವಜನಿಕ ಅಭ್ಯಾಸದ ವಿಷಯವನ್ನಾಗಿ ಮಾಡಲು, ‘ಚಾರ್ ಧಾಮ್ಸ್’ ಮತ್ತು ಕಾಮಾಖ್ಯದೇವಿಯ ಸ್ಥಳದಲ್ಲಿ ಮಹರ್ಷಿ ಸಾಂದೀಪನಿ ಪ್ರತಿಷ್ಠಾನ ನೇತೃತ್ವದಲ್ಲಿ ಐದು ವೇದ ವಿದ್ಯಾಪೀಠಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) ಅಡಿಯಲ್ಲಿ ಆಧುನಿಕ ಸಮಾಜದಲ್ಲಿ ವೇದಗಳ ಪಠ್ಯದ ಪ್ರಸ್ತುತತೆಯನ್ನು ಕಾಪಾಡಿಕೊಳ್ಳಲು ವಿಶೇಷ ವೈದಿಕ ಶಿಕ್ಷಣ ಮಂಡಳಿಯು ಅಸ್ತಿತ್ವಕ್ಕೆ ಬರಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ವೇದಗಳ ಜ್ಞಾನವು ಸಮಾಜದ ಎಲ್ಲಾ ವರ್ಗಗಳಿಗೆ ಪ್ರಯೋಜನಕಾರಿ ಎಂಬುದನ್ನು ಸಾಬೀತುಪಡಿಸುತ್ತದೆ. ವೇದ ಗಣಿತ ಇದಕ್ಕೆ ಜೀವಂತ ಉದಾಹರಣೆ. ಸಮಾಜದ ಬಹುತೇಕ ಎಲ್ಲ ವಿದ್ಯಾರ್ಥಿಗಳು ವೇದ ಗಣಿತದ ಲಾಭ ಪಡೆಯುತ್ತಿದ್ದಾರೆ ಎಂದರು. ಕೆಲವು ಪ್ರತಿಷ್ಠಿತ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ವೇದ ಶಿಕ್ಷಣವನ್ನು ನೀಡುತ್ತಿವೆ.
ಆಧುನಿಕ ಸಮಾಜದಲ್ಲಿ ವೇದಗಳ ಪಠಣದ ಪ್ರಸ್ತುತತೆಯನ್ನು ಕಾಪಾಡಿಕೊಳ್ಳಲು ಮತ್ತು ವೇದಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನವು ದೇಶದಾದ್ಯಂತ 6,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲೂ ವೇದ ಗಣಿತದ ಬಗ್ಗೆ ಚರ್ಚಿಸಿದ್ದರು.