ಹೊಸದಿಗಂತ ವರದಿ, ಮಡಿಕೇರಿ:
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಭಾನುವಾರ ಸುಂಟಿಕೊಪ್ಪ ಹೋಬಳಿಯ ಕಾನ್’ಬೈಲ್, ನಾಕೂರು ಶಿರಂಗಾಲ, ಕೊಡಗರಹಳ್ಳಿ, ಕಂಬಿಬಾಣೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರಲ್ಲದೆ, ಸುಂಟಿಕೊಪ್ಪ ಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸಿ ನಂತರ ಮನೆಮನೆಗೆ ತೆರಳಿ ಮತ ಯಾಚಿಸಿದರು.
ಹಲವು ಬಹಿರಂಗ ಸಭೆಗಳಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರಲ್ಲದೆ, ಪ್ರಗತಿಯೇ ಬಿಜೆಪಿಯ ಮಂತ್ರ, ಆದ್ದರಿಂದ ಬಿಜೆಪಿಯೇ ಭರವಸೆ ಎಂದರು.
ಸುಂಟಿಕೊಪ್ಪದ ಗದ್ದೆಹಳ್ಳದಿಂದ ಆರಂಭವಾದ ರೋಡ್ ಶೋ ಸುಮಾರು ಎರಡು ಕಿ. ಮೀ. ಸಾಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಕೊನೆಗೊಂಡಿತು.
ಪಟ್ಟಣದ ಕನ್ನಡ ವೃತ್ತದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತಾನಾಡಿದ ಅಪ್ಪಚ್ಚು ರಂಜನ್, ಈಗಾಗಲೇ ಮಡಿಕೇರಿ ಕ್ಷೇತ್ರ ವಿದ್ಯಾ ಕೇಂದ್ರವಾಗಿ ರೂಪುಗೊಂಡಿದೆ, ಈಗ ನಮ್ಮ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಮಂಗಳೂರು, ಮೈಸೂರು, ಬೆಂಗಳೂರುಗಳಿಗೆ ಹೋಗಬೇಕಾಗಿಲ್ಲ, ಕಾನೂನು ಮತ್ತು ಐಐಟಿ ಹೊರತುಪಡಿಸಿ ಎಲ್ಲವೂ ಲಭ್ಯವಿದೆ, ಮುಂದಿನ ಅವಧಿಯಲ್ಲಿ ಆ ಶಿಕ್ಷಣ ಸಂಸ್ಥೆಗಳನ್ನು ಕೂಡಾ ಕ್ಷೇತ್ರದಲ್ಲಿ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು .
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ಜಿ. ಮೇದಪ್ಪ, ಬಿಜೆಪಿ ನಾಯಕರಾದ ಬಿ.ಬಿ.ಭಾರತೀಶ್, ಲೋಕೇಶ್, ಅಭಿಮನ್ಯು ಕುಮಾರ್ ಸಭೆಗಳಲ್ಲಿ ಮಾತನಾಡಿದರು.