ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಾಮೇಶ್ವರಂ ಕೆಫೆ ಬ್ಲಾಸ್ಟ್ ಸಂಭವಿಸಿ ಐದು ದಿನಗಳಾದರೂ ಆರೋಪಿಯ ಸುಳಿವು ಸಿಕ್ಕಿಲ್ಲ. ಇದೀಗ ಆರೋಪಿಯ ಹುಡುಕಾಟಕ್ಕಾಗಿ ಪೊಲೀಸರು ಮ್ಯಾಪಿಂಗ್ ಮೊರೆ ಹೋಗಲಿದ್ದಾರೆ.
ಆರೋಪಿ ಬಹಳ ಚಾಲೂಕಾಗಿ ಎಲ್ಲಿಯೂ ತನ್ನ ಮುಖ ಕಾಣುವಂತೆ ಓಡಾಡಿಲ್ಲ. ಕೆಫೆಗೆ ಬರುವ ಮುನ್ನ ಯಾವ ರಸ್ತೆಯಲ್ಲಿ ಓಡಾಡಿದ್ದಾನೆ, ಬ್ಲಾಸ್ಟ್ ಮಾಡಿದ ನಂತರ ಯಾವ ರಸ್ತೆಯಿಂದ ಹೋಗಿದ್ದಾನೆ, ಎಲ್ಲಿಗೆ ಹೋಗಿದ್ದಾನೆ ಎಂದು ತಿಳಿಯಲು ಮ್ಯಾಪಿಂಗ್ ಮಾಡಲಾಗುತ್ತದೆ.
ಆರೋಪಿ ಬಸ್ನಲ್ಲಿ ರಾಮೇಶ್ವರಂ ಕೆಫೆ ಬಳಿ ಬಂದಿದ್ದಾನೆ, ಸ್ವಲ್ಪ ದೂರ ನಡೆದು ಕೆಫೆ ತಲುಪಿದ್ದಾನೆ. ರಸ್ತೆಯಲ್ಲಿ ಎಲ್ಲಿಯೂ ಕೂಡ ಆತ ಮಾಸ್ಕ್ ತೆಗೆದಿಲ್ಲ. ಸುತ್ತ ಮುತ್ತ ಏರಿಯಾಗಳಲ್ಲಿ ಮ್ಯಾಪಿಂಗ್ ಮಾಡಲಾಗುತ್ತಿದ್ದು, ಎಲ್ಲಿಂದ ಅವನ ಪಯಣ ಆರಂಭವಾಯ್ತು ಎಂದು ನೋಡಲಾಗುತ್ತಿದೆ.
ರಸ್ತೆಗಳ ಮ್ಯಾಪಿಂಗ್ ವೇಳೆ ಒಂದು ಸುಳುಹು ಸಿಕ್ಕಿದರೂ ಮುಂದಿನ ಶೋಧಕ್ಕೆ ಅನುಕೂಲವಾಗಲಿದೆ. ಯಾವುದೇ ಸಿಸಿಟಿವಿ ಕ್ಯಾಮೆರಾಗಳಲ್ಲಿಯೂ ಆತನ ಮುಖ ಕಂಡುಬಂದಿಲ್ಲ. ಎಂಥದ್ದೇ ಕಳ್ಳ ಆಗಲಿ ಒಂದಾದರೂ ಸುಳುಹು ಬಿಟ್ಟು ಹೋಗಿರಲೇಬೇಕು ಎಂದು ಪೊಲೀಸರು ಹುಡುಕಾಡುತ್ತಿದ್ದಾರೆ.
ಶಂಕಿತ ಉಗ್ರನ ಪತ್ತೆಗಾಗಿ ರಿವರ್ಸ್ ಹಾಗೂ ಫಾರ್ವರ್ಡ್ ಮ್ಯಾಪಿಂಗ್ ಮಾಡಲಾಗುತ್ತದೆ. ಇದರಿಂದಾಗಿ ಆತನ ಬಗ್ಗೆ ಮುಖ್ಯ ಸುಳುಹು ಸಿಗು ಸಾಧ್ಯತೆ ಇದೆ.