ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಮಗಳು ತಪ್ಪು ಮಾಡಿದ್ರೆ ಕೇತನ್ನನ್ನು ತಳ್ಳಿ ಕೊಲೆಗೈದ ಅದೇ ಕೋಟೆಯಿಂದ ಅವಳನ್ನು ತಳ್ಳಿ ಬಿಡಿ ಎಂದು ಸಿಯಾ ಗೋಯಲ್ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಸಿಯಾಳ ತಾಯಿ ಪೂಜಾ ಗೋಯಲ್ ಮಾತನಾಡಿದ್ದು, ಕೇತನ್ ಜೊತೆ ಮದುವೆ ಇಷ್ಟವಿಲ್ಲ ಎಂದು ಸಿಯಾ ಯಾವತ್ತೂ ಹೇಳಿಲ್ಲ. ಮದುವೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲ ಇಬ್ಬರೂ ನವೆಂಬರ್ನಲ್ಲಿ ರಾಜಸ್ಥಾನದ ಉದಯಪುರದ ಅರಮನೆಯಲ್ಲಿ ಮದುವೆಯಾಗಲು ಸಿದ್ಧರಾಗಿದ್ದರು. ಕೇತನ್ ಸಾವು ಕೇವಲ ಒಂದು ಕುಟುಂಬವನ್ನು ಮಾತ್ರವಲ್ಲ, ಎರಡು ಕುಟುಂಬಗಳಿಗೂ ತೀವ್ರ ದುಃಖ ಉಂಟು ಮಾಡಿದೆ.ಕೇತನ್ ಕುಟುಂಬಕ್ಕೆ ನಾವು ಏನು ಹೇಳುವುದು ಅರ್ಥವಾಗುತ್ತಿಲ್ಲ. ಆರೋಪಿ ನನ್ನ ಮಗಳಾಗಿದ್ದರೂ ಪರವಾಗಿಲ್ಲ. ಕಠಿಣ ಶಿಕ್ಷೆ ಕೊಡಿ. ಅವಳು ತಪ್ಪಿತಸ್ಥೆ ಎಂದು ಸಾಬೀತಾದರೆ ಕೇತನ್ನನ್ನು ತಳ್ಳಿದ ಜಾಗದಿಂದ ಅವಳನ್ನು ತಳ್ಳಿಬಿಡಿ ಎಂದಿದ್ದಾರೆ.
ಸಿಯಾಳ ತಂದೆ ಪ್ರವೀಣ್ ಗೋಯಲ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರೋಪಿ ನನ್ನ ಸ್ವಂತ ಮಗಳಾಗಿದ್ದರೂ, ಕೇತನ್ನನ್ನು ತಳ್ಳಿದ ಕೋಟೆಯಿಂದ ಅವಳನ್ನು ಕೆಳಗೆ ತಳ್ಳಬೇಕು ಎಂದಿದ್ದಾರೆ.ಈ ಘಟನೆಯನ್ನು ನಂಬಲು ನಮಗೆ ಕಷ್ಟ. ನಾವು ಕೇತನ್ನನ್ನು ಮಗನಂತೆ ಭಾವಿಸಿದ್ದೆವು. ಆತನ ತಂದೆ ತಾಯಿ ತಮ್ಮ ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ನಾವು ಸಹ ಅಷ್ಟೇ ದುಃಖಿತರಾಗಿದ್ದೇವೆ. ನಾವು ಸಹ ಅವನನ್ನು ತುಂಬಾ ಪ್ರೀತಿಸುತ್ತಿದ್ದೆವು. ನಾನು ಅವನನ್ನು ಸ್ವಂತ ಮಗನಂತೆ ಹಚ್ಚಿಕೊಂಡಿದ್ದೆ. ಒಳ್ಳೆಯ ಹುಡುಗನನ್ನು ಕಳೆದುಕೊಂಡಿದ್ದೇವೆ. ಇದರಿಂದ ನಮಗೆ ತುಂಬಾ ದುಃಖವಾಗಿದೆ ಎಂದಿದ್ದಾರೆ.
ಚೇತನ್ ಎನ್ನುವ ಹುಡುಗನನ್ನು ಸಿಯಾ ಪ್ರೀತಿಸಿದ್ದು ನಮಗೆ ಗೊತ್ತಿಲ್ಲದ ವಿಷಯ. ಮನೆಗೆ ಬಂದು ಹೇಳಿದ್ದರೆ ನಾವು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಿದ್ವಿ. ನಿಶ್ಚಿತಾರ್ಥವಾದಾಗಿನಿಂದ ಅವಳು ಕೇತನ್ ಜೊತೆ ಮಾತ್ರ ಮಾತನಾಡುತ್ತಿದ್ದಳು ಎಂದು ಸಿಯಾಳ ತಾಯಿ ಮಾಹಿತಿ ನೀಡಿದ್ದಾರೆ. ಆಕೆಯ ತಂದೆ ಕೂಡ ಮಗಳ ಪ್ರೇಮ ಸಂಬಂಧದ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ.



