ಹೊಸದಿಗಂತ ವರದಿ, ಮಂಗಳೂರು:
ಮಂಗಳೂರು-ಕಬಕ ಪುತ್ತೂರು ಪ್ರಯಾಣಿಕ ರೈಲನ್ನು ಕೆಲವು ದಿನಗಳ ಹಿಂದೆಯಷ್ಟೇ ಸುಬ್ರಹ್ಮಣ್ಯಕ್ಕೆ ವಿಸ್ತರಣೆ ಮಾಡಿ ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಿ ಪರಿವರ್ತಿಸಲಾಗಿದೆ. ಆದರೆ, ಬೆಳಗ್ಗಿನ ಜಾವ ತೆರಳುವ ಪ್ರಯಾಣಿಕರ ರೈಲಿಗೆ ಕಬಕ-ಪುತ್ತೂರು ನಿಲ್ದಾಣದಲ್ಲಿ ಟಿಕೆಟ್ ವಿತರಣೆಗೆ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಪರದಾಡುವ ಸ್ಥಿತಿಯಿದ್ದು, ಇಲಾಖೆಗೂ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ.
ಮಂಗಳೂರಿನಿಂದ ಬೆಳಗ್ಗೆ ೪ ಗಂಟೆಗೆ ಹೊರಡುವ ರೈಲು ೫.೨೦ಕ್ಕೆ ಕಬಕ ಪುತ್ತೂರು ರೈಲು ನಿಲ್ದಾಣ ತಲುಪುತ್ತದೆ. ಆದರೆ ಇಲ್ಲಿನ ಟಿಕೆಟ್ ಕೌಂಟರ್ ತೆರೆಯುವುದು ಬೆಳಗ್ಗೆ ೮ಕ್ಕೆ . ಈ ರೈಲಿನಲ್ಲಿ ಸುಬ್ರಹ್ಮಣ್ಯ ಸಂಚರಿಸುವ ಪ್ರಯಾಣಿಕರಿಗೆ ಟಿಕೆಟ್ ನೀಡುವ ವ್ಯವಸ್ಥೆಯೇ ಇಲ್ಲ.
ನೂರಾರು ಮಂದಿ ಉಚಿತ ಪ್ರಯಾಣ
ಗುರುವಾರ ರಾತ್ರಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವಕ್ಕೆ ಸುಬ್ರಹ್ಮಣ್ಯ ಭಾಗದಿಂದ ಆಗಮಿಸಿದ ನೂರಾರು ಭಕ್ತರು ಬೆಳಗ್ಗಿನ ರೈಲಿನ ಮೂಲಕ ಹಿಂದಿರುಗಿದ್ದಾರೆ. ಟಿಕೆಟ್ ಪಡೆದುಕೊಳ್ಳಬೇಕು ಎನ್ನುವ ಸೌಜನ್ಯ ಪ್ರಯಾಣಿಕರಲ್ಲಿ ಇದ್ದರೂ ಟಿಕೆಟ್
ಕೌಂಟರ್ ಬಂದ್ ಇದ್ದ ಕಾರಣಕ್ಕೆ ರೈಲು ಪ್ರಯಾಣ ಉಚಿತ.
ರೈಲು ಬರುತ್ತಿದ್ದಂತೆ ಪ್ರಯಾಣಿಕರು ರೈಲೇರಿ ಸುಬ್ರಹ್ಮಣ್ಯಕ್ಕೆ ಉಚಿತವಾಗಿ ಅನಿವಾರ್ಯವಾಗಿ ತೆರಳಿದ್ದಾರೆ. ಕೆಲವು ಮಂದಿ ಆಪ್ನಲ್ಲಿ ಟಿಕೆಟ್ ಮಾಡಿದ್ದು ಬಿಟ್ಟರೆ, ತಕ್ಷಣಕ್ಕೆ ಇದು ಸಾಧ್ಯವಾಗದೆ ನೂರಾರು ಮಂದಿ ಟಿಕೆಟ್ ಇಲ್ಲದೆ ಉಚಿತವಾಗಿ ಪ್ರಯಾಣಿಸುವಂತಾಗಿದೆ. ಬೆಳಗ್ಗಿನ ಜಾವ ತೆರಳುವ ರೈಲಿನಲ್ಲಿ ಟಿಕೆಟ್ ತಪಾಸಣೆಯೂ ಸರಿಯಾಗಿ ನಡೆಯುತ್ತಿಲ್ಲ ಎಂದು ರೈಲು ಪ್ರಯಾಣಿಕರು ತಿಳಿಸಿದ್ದಾರೆ.
ಸಾರ್ವಜನಿಕ ಆರೋಪ
ಟಿಕೆಟ್ ನೀಡುವ ವ್ಯವಸ್ಥೆ ಇಲ್ಲದಿರುವುದರಿಂದ ಪ್ರಯಾಣಿಕರು ಸಂಚರಿಸುವುದಿಲ್ಲ ಎಂಬ ಕಾರಣ ನೀಡಿ ಮುಂದಕ್ಕೆ ರೈಲನ್ನು ನಿಲ್ಲಿಸುವ ಹುನ್ನಾರ ನಡೆಸಲಾಗುತ್ತಿದೆ ಎನ್ನುವ ಆರೋಪ ಕೂಡ ವ್ಯಕ್ತವಾಗಿದೆ.