July 14, 2026
Tuesday, July 14, 2026
spot_img

ನಮ್ಮ ಪ್ರತಿಯೊಂದು ಕ್ಷಣ ಈ ದಿನಕ್ಕಾಗಿಯೇ ಮೀಸಲು: ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿ ಮಂಧಾನ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತಿಹಾಸ ನಿರ್ಮಿಸಿದ ಕ್ಷಣ. ಭಾರತದ ಮಹಿಳಾ ಕ್ರಿಕೆಟ್‌ ತಂಡ ಮೊದಲ ಬಾರಿಗೆ ವಿಶ್ವಕಪ್‌ ಟ್ರೋಫಿಯನ್ನು ಗೆದ್ದು ರಾಷ್ಟ್ರವನ್ನೇ ಹೆಮ್ಮೆ ಪಡುವಂತೆ ಮಾಡಿದೆ. ನವಿ ಮುಂಬೈನ ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳ ಅಂತರದಲ್ಲಿ ಸೋಲಿಸಿ, ಭಾರತ ತಂಡ ಚೊಚ್ಚಲ ಮಹಿಳಾ ವಿಶ್ವಕಪ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ಜಯದೊಂದಿಗೆ 47 ವರ್ಷಗಳ ನಿರೀಕ್ಷೆಗೆ ತೆರೆ ಬಿದ್ದಿದೆ.

ಐತಿಹಾಸಿಕ ಜಯದ ನಂತರ, ಭಾರತದ ತಾರೆ ಬ್ಯಾಟರ್‌ ಸ್ಮೃತಿ ಮಂಧಾನ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ಈ ಹಿಂದೆ ಅನೇಕ ಬಾರಿ ನಮ್ಮ ಹೃದಯ ಒಡೆದಿತ್ತು. ಪ್ರತಿ ವಿಶ್ವಕಪ್‌ನಲ್ಲಿ ನಾವು ಗೆಲುವಿನ ಹತ್ತಿರ ಬಂದು ಸೋತಿದ್ದೇವೆ. ಆದರೆ ನಾವು ಎಂದಿಗೂ ಉತ್ಸಾಹ ಕಳೆದುಕೊಂಡಿರಲಿಲ್ಲ. ಈ ಬಾರಿ ಟ್ರೋಫಿ ಗೆಲ್ಲಬೇಕೆಂಬ ದೃಢನಿಶ್ಚಯ ನಮ್ಮಲ್ಲಿ ಇತ್ತು,” ಎಂದು ಮಂಧಾನ ಹೇಳಿದರು.

ಅವರು ಮುಂದುವರಿಸಿ, “ಈ ಕ್ಷಣಕ್ಕಾಗಿ ಕಳೆದ 45 ದಿನಗಳಿಂದ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ಪ್ರತಿಯೊಂದು ಅಭ್ಯಾಸ, ಪ್ರತಿಯೊಂದು ಕ್ಷಣವೂ ಈ ದಿನಕ್ಕಾಗಿ. ನಮಗೆ ಸಿಕ್ಕ ಜನರ ಬೆಂಬಲ, ಪ್ರೀತಿಯೇ ನಮ್ಮ ಬಲವಾಗಿತ್ತು,” ಎಂದು ಭಾವುಕರಾದರು.

ತಂಡದ ಏಕತೆ ಕುರಿತು ಮಾತನಾಡುತ್ತಾ ಮಂಧಾನ ಹೇಳಿದರು, “ಟೂರ್ನಿಯಿಡೀ ನಾವು ಒಗ್ಗಟ್ಟಿನಿಂದ ಆಡಿದ್ದೇವೆ. ಒಳ್ಳೆಯದು, ಕೆಟ್ಟದ್ದೆಂಬ ಭಾವವಿಲ್ಲದೆ ಪರಸ್ಪರ ಬೆಂಬಲಿಸಿದ್ದೇವೆ. ಈ ಸಕಾರಾತ್ಮಕತೆಯೇ ನಮ್ಮನ್ನು ವಿಶ್ವಕಪ್‌ ಟ್ರೋಫಿಯತ್ತ ಕೊಂಡೊಯ್ದಿದೆ,” ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !