ಹೊಸದಿಗಂತ ವರದಿ ಹಾವೇರಿ :
ರಾಜ್ಯದ ಪ್ರತಿಯೊಬ್ಬ ನಾಗರಿಕನ ಕ್ಷೇಯೋಭಿವೃದ್ಧಿಗೆ ಎಲ್ಲರೂ ಮತ ಚಲಾಯಿಸುವುದು ಬಹಳ ಅವಶ್ಯಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬುಧವಾರ ಶಿಗ್ಗಾಂವಿಯಲ್ಲಿ ಮತಚಲಾಯಿಸಿ ಮಾತನಾಡಿ, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಬಹಳ ಮಹತ್ವದ ಮಹತ್ವದ್ದಾಗಿದೆ.ರಾಜ್ಯದ ಭವ್ಯ ಭವಿಷ್ಯ ಬರೆಯಲು ಮತದಾನ ಮಹತ್ವದ್ದು ಎಲ್ಲರೂ ಮನೆಯಿಂದ ಹೊರಬಂದು ಮತದಾನ ಮಾಡಿ ಎಂದು ಹೇಳಿದರು. ಕರ್ನಾಟಕದ ಪ್ರತಿಯೊಬ್ಬ ನಾಗರಿಕನ ಕ್ಷೇಯೋಭಿವೃದ್ಧಿಗೆ ಜನರ ಮತ ಇರುತ್ತದೆ. ಭಾರತೀಯ ಜನತಾ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಗುತ್ತದೆ ಎನ್ನುವ ಆತ್ಮವಿಶ್ವಾಸ ನನಗೆ ಇದೆ. ಶಾಸಕನಾಗಿ, ಮುಖ್ಯಮಂತ್ರಿಯಾಗಿ ಮತದಾನ ಮಾಡುವುದರಲ್ಲಿ ವ್ಯತ್ಯಾಸ ಏನಿಲ್ಲ. ಕರ್ನಾಟಕದ ನಾಗರಿಕನಾಗಿ ನಾನು ಮತದಾನ ಮಾಡಿದ್ದೇನೆ ಎಂದರು.
ಬಜರಂಗಬಲಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಚುನಾವಣೆಗಾಗಿ ನಾವು ಯಾವುದನ್ನು ಮಾಡುವುದಿಲ್ಲ. ನಾವು ಬಜರಂಗಬಲಿ ಮೇಲಿನ ನಂಬಿಕೆ, ವಿಶ್ವಾಸಕ್ಕಾಗಿ ಮಾಡಿದ್ದೇವೆ. ನಮ್ಮ ಮತ್ತು ದೇವರ ನಡುವೆ ಇರುವ ಸಂಬಂಧ ಹಾಗಿದೆ. ಕಾಂಗ್ರೆಸ್ ನವರು ಕೂಡ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಅವರು ಹೇಳಿದ್ದನ್ನು ಮಾಡುವುದಿಲ್ಲ. ಮಾಡೋದನ್ನು ಅವರು ಹೇಳುವುದಿಲ್ಲ ಎಂದರು.
ಎಲ್ಲರೂ ಮತದಾನ ಮಾಡಬೇಕು, ನಾನು ಮತದಾನ ಮಾಡಿದ್ದೇನೆ. ತಾವು ಹೊರಗಡೆ ಬನ್ನಿ ಹಕ್ಕನ್ನು ಚಲಾಯಿಸಿ. ರಾಜ್ಯದ ಭವ್ಯ ಭವಿಷ್ಯ ಬರೆಯಲು ಮತದಾನ ಮಹತ್ವದ್ದು ಎಂದರು.
ಈ ಚುನಾವಣೆ ಒಂದು ಕಡೆ ಅಭಿವೃದ್ಧಿ, ಮತ್ತೊಂದು ಕಡೆ ಸುಳ್ಳಿನ ಚುನಾವಣೆ. ಕಳೆದ ಬಾರಿ ಅಪವಿತ್ರ ಮೈತ್ರಿ ಮಾಡಿಕೊಂಡು ಸರಕಾರ ನಡೆಸಲು ಆಗದಿದ್ದಾಗ ನಮಗೆ ಸರ್ಕಾರ ರಚಿಸಲು ಅವಕಾಶ ಕೊಟ್ಟರು ಎಂದು ಹೇಳಿದರು.