ಹೊಸದಿಗಂತ ವರದಿ, ಹೊಸಪೇಟೆ :
ಅರ್ಚಕರ ಬಹುದಿನಗಳ ಬೇಡಿಕೆಯಾಗಿರುವ ತಸ್ತಿಕ್ ಹಣ ಹೆಚ್ಚಳ ದ ಬಗ್ಗೆ ನಾಳಿನ ಆಯವ್ಯ ದಲ್ಲಿ ಶುಭಸುದ್ದಿ ದೊರೆಯುವ ಭರವಸೆ ಇದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಹೇಳಿದರು.
ಹೊಸಪೇಟೆಯ 29 ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ ದಲ್ಲಿ ಪಾಲ್ಗೊಂಡು ಮಾತನಾಡಿದರು. ಮಕ್ಕಳಲ್ಲಿ ನಾವು ನಮ್ಮ ಸಂಸ್ಕೃತಿ ಮತ್ತು ಧಾರ್ಮಿಕತೆ ಯ ಮೂಲ ಅಂಶಗಳನ್ನು ಬೆಳೆಸುವ ಅಗತ್ಯವಿದೆ. ಮಕ್ಕಳಲ್ಲಿ ಮಮ್ಮಿ ಡ್ಯಾಡಿ ಸಂಸ್ಕೃತಿ ಹೆಚ್ಚಾಗುತ್ತಿದೆ. ಇದರಿಂದ ವೃದ್ಧಾಶ್ರಮ ಸೇರ್ಪಡೆ, ತಂದೆ ತಾಯಿಗಳನ್ನು ಮತನಾಡಿಸದೇ ಇರುವ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ, ಮಕ್ಕಳಲ್ಲಿ ಅಪ್ಪ ಅಮ್ಮ ಸಂಸ್ಕೃತಿ ಯನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಅರ್ಚಕರುಗಳಿಗೆ 6 ನೇ ವೇತನ ಆಯೋಗ ಮತ್ತು ಆರೋಗ್ಯ ವಿಮೆಯನ್ನು ಜಾರಿಗೊಳಿಸಿದ್ದೇವೆ. ತಸ್ತಿಕ್ ಹಣ ಹೆಚ್ಚಳಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾಳಿನ ಆಯವ್ಯಯ ದಲ್ಲಿ ಸಿಹಿಸುದ್ದಿ ದೊರೆಯುವ ಭರವಸೆ ಇದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಆಚರಣೆ ಸಮಿತಿಯ ಅರ್ಚಕ ಪರಿಮಳಾಚಾರ್ಯ, ಹುಡಾ ಅಧ್ಯಕ್ಷ ಅಶೋಕ್ ಜೀರೆ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಆನಂದ, ಯುವ ಮುಖಂಡ ಸಂದೀಪ್ ಸಿಂಗ್, ಸಪ್ತಾಹ ಸಮಿತಿ ಆಚರಣೆ ಅಧ್ಯಕ್ಷ ನರಸಿಂಹ ಮೂರ್ತಿ ಇತರರಿದ್ದರು.
ಸಪ್ತಾಹ ಸಮಿತಿಯ ಪಿ.ಆರ್. ಪ್ರಹ್ಲಾದ್ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ರಾಯರ ಸಪ್ತಾಹದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.