ಹೊಸದಿಗಂತ ವರದಿ ಸುಂಟಿಕೊಪ್ಪ:
ಕಂಬಿಬಾಣೆ ಗ್ರಾಮ ಪಂಚಾಯಿತಿಗೆ ಸೇರಿದ ಅತ್ತೂರು ನಲ್ಲೂರು ಕಡ್ಲೆಮನೆ ಭಾಗದ ತೋಟಗಳಿಗೆ ಕಾಡಾನೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ. ಆಹಾರ ಅರಸಿ ಬರುತ್ತಿರುವ ಕಾಡಾನೆಗಳು ತೋಟದಲ್ಲಿಯೇ ಬೀಡುಬಿಟ್ಟಿದ್ದು, ಕಾಫಿ, ಕರಿಮೆಣಸು ಗಿಡಗಳನ್ನು ಧ್ವಂಸಗೊಳಿಸುತ್ತಿದ್ದು ಇದರಿಂದ ಕೃಷಿಕರಿಗೆ, ಕಾಫಿ ತೋಟದ ಬೆಳೆಗಾರರಿಗೆ ಸಾವಿರಾರು ರೂಪಾಯಿ ನಷ್ಟ ಉಂಟಾಗುತ್ತಿದೆ ಎಂದು ಬೆಳೆಗಾರರ ಪರವಾಗಿ ಸುಭಾಷ್ ಪೈ ಅವರು ಅಳಲು ತೋಡಿಕೊಂಡಿದ್ದಾರೆ.
ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಆದರೆ ನಿರಂತರ ದಾಳಿ ನಡೆಸುವ ಕಾಡಾನೆಗಳು ರೋಬಸ್ಟ ಮತ್ತು ಅರೇಬಿಕಾ ಕಾಫಿ ಗಿಡಗಳನ್ನು ದ್ವಂಸಗೊಳಿಸಿವೆ. ದಿನನಿತ್ಯ ಸುತ್ತಮುತ್ತಲಿನ ತೋಟಗಳಲ್ಲಿ ಹಗಲು ವೇಳೆಯಲ್ಲಿಯೇ ಆನೆಗಳು ಕಂಡುಬರುತ್ತಿದ್ದು, ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಹಿಂಜರಿಯುವಂತಾಗಿದೆ. ಸಾರ್ವಜನಿಕರು ಮನೆಯಿಂದ ಹೊರ ಬರುವುದಕ್ಕೂ ಭಯಪಡುತ್ತಿದ್ದಾರೆ. ಈ ಭಾಗಕ್ಕೆ ರಾತ್ರಿ ವೇಳೆ ಸಂಚರಿಸುವ ವಾಹನ ಚಾಲಕರು, ಪ್ರಯಾಣಿಕರು ಕಾಡಾನೆಗಳಿಂದ ಜೀವ ಭಯದಲ್ಲಿ ಸಾಗುವಂತಾಗಿದೆ. ಕೂಡಲೇ ಅರಣ್ಯ ಅಧಿಕಾರಿಗಳು ಆನೆಗಳನ್ನು ಅರಣ್ಯಗಳಿಗೆ ಹಿಮ್ಮಟ್ಟಿಸುವಂತಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.