ಹೊಸದಿಗಂತ ವರದಿ, ಕಲಬುರಗಿ:
ರಾಜ್ಯದಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಕಲಿತ ಇಂಗ್ಲಿಷ್ ಪದವಿ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ನಾಗರಿಕ ಸೇವಾ ಮತ್ತು ವೃಂದ ನೇಮಕಾತಿಗೆ ಅಗತ್ಯ ತಿದ್ದುಪಡಿ ತರಬೇಕು ಎಂದು ಶಿಕ್ಷಕ ಹುದ್ದೆ ಅವಕಾಶ ವಂಚಿತ ವಿದ್ಯಾರ್ಥಿಗಳಾದ ಬಡೇಸಾಬ್ ಮುಜಾವರ, ಸುನೀಲ್ ಪವಾರ, ವಸುಂಧರ, ಸುರೇಶ, ಶಿಲ್ಪಾ ಎಸ್.ಕೆ ಆಗ್ರಹಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 21 ರಂದು ಪದವೀಧರ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಬಿದ್ದಿದೆ. ಅರ್ಜಿ ಸಲ್ಲಿಕೆಗೆ ಹೈಕೋರ್ಟ್ ಮೆಟ್ಟೆಲೇರಿ ತಡೆಯಾಜ್ಞೆ ತರುತ್ತವೆ. ಅಷ್ಟೇ ಅಲ್ಲ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಕಾಲಂ ನಂ. 2 ರಲ್ಲಿ ಪದವೀಧರ ಪ್ರಾಥಮಿಕ ಇಂಗ್ಲಿಷ್ ಭಾಷಾ ಶಿಕ್ಷಕರಾಗಲು ಕಾಲಂ ನಂ.4 ರ ಭಾಷಾ ವಿಷಯದ ಹುದ್ದೆಗಳಿಗಾಗಿನ (ಎ)ಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಎರಡು ಭಾಷೆಗಳನ್ನು ಕಡ್ಡಾಯವಾಗಿ ಅಭ್ಯಸಿಸಬೇಕು. ಐಚ್ಚಿಕ ವಿಷಯವಾಗಿ ಮೂರು ವರ್ಷಗಳ ಅವಧಿಯಲ್ಲಿ ಕನ್ನಡ, ಆಂಗ್ಲ, ಹಿಂದಿ, ಮರಾಠಿ, ಉರ್ದು, ತೆಲುಗು, ತಮಿಳು, ಮಲಿಯಾಳಂ, ಕೊಂಕಣಿ, ಸಂಸ್ಕøತ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಭೌಗೋಳಿಕ ವಿಷಯಗಳನ್ನು ಅಭ್ಯಾಸ ಮಾಡಬೇಕು ಎಂಬ ನಿಯಮವಿದೆ. ಆದರೆ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಿ.ಎ. (ಆನರ್ಸ್) ಪದವಿ ಪಡೆದ ಇಂಗ್ಲಿಷ ವಿಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯವನ್ನು ಮೂರು ವರ್ಷಗಳ ಅಧ್ಯಯನ ನಡೆಸಿರುತ್ತಾರೆ ಎಂದಿರುವ ಅವರು, ನಮಗೆ ಶಿಕ್ಷಕ ಹುದ್ದೆ ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲ. ಹೀಗಾಗಿ, ಕೂಡಲೇ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಶಿಕ್ಷಣ ಸಚಿವ ಬಿ. ಸಿ. ನಾಗೇಶ ಸೇರಿ ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಮಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಮನವಿ ಮಾಡಿದರು.