ಹೊಸದಿಗಂತ ವರದಿ ಹುಬ್ಬಳ್ಳಿ:
ನಗರದ ಕಾಲೇಜ್ ವೊಂದರ ವಿದ್ಯಾರ್ಥಿ ಹೆಸರಲ್ಲಿ ನಕಲಿ ಇಸ್ಟಾಗ್ರಾಂ ಖಾತೆ ತೆರೆದು ಅಶ್ಲೀಲ ಚಿತ್ರಗಳ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಂಗಳವಾರ ಇಲ್ಲಿಯ ಜೆ.ಸಿ. ನಗರದ ಮಹಿಳಾ ಕಾಲೇಜಿನಿಂದ ಆರಂಭಿಸಿದ ನೂರಾರು ವಿದ್ಯಾರ್ಥಿನಿಯರು ಮಿನಿ ವಿಧಾನ ಸೌಧ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನಲ್ಲಿ ಬೇಕೆ ಬೇಕೂ ನ್ಯಾಯಾಬೇಕು, ದುಷ್ಟರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಎಬಿವಿಪಿ ಜಿಲ್ಲಾ ಪ್ರಮುಖ ಡಾ. ಪುನೀತ್, ದೇಶದ ಹೆಣ್ಣುಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಖಾಸಗಿ ಕಾಲೇಜು ವಿದ್ಯಾರ್ಥಿನಿಯರ ಛಾಯಾಚಿತ್ರ ತಿರುಚಿ ಅವಮಾನ ಮಾಡಲಾಗಿದೆ. ಉಡುಪಿ ನಂತರ ಇಲ್ಲಿಯೂ ಸಹ ಆಗಿದೆ. ಆದಷ್ಟು ಬೇಗ ದುಷ್ಕರ್ಮಿಗಳ ಬಂಧಿಸಿ ಶಿಕ್ಷೆ ಯಾಗುವಂತೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕು ಹೋರಾಟ ಪ್ರಮುಖ ರಾಘವೇಂದ್ರ ಪೆದ್ದಾರ, ಸುಶೀಲ್ ಇಟಗಿ, ನವೀನ್ ಬಳ್ಳಾರಿ, ಪೃಥ್ವಿಕುಮಾರ್, ಎಬಿವಿಪಿ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸಾ, ಸಿದ್ಧಾರ್ಥ, ಪುನೀತ್ ಕುಮಾರ್ ಬಿ. ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.