ಹೊಸದಿಗಂತ ವರದಿ, ಕಾರವಾರ:
ತಾಲೂಕಿನ ಮುಡಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಜಮೀನು ನೀಡಿರುವ ರೈತರ ಸ್ವಾಧೀನ ಪ್ರಕ್ರಿಯೆಗೆ ಭೂ ಬೆಲೆ ನಿರ್ಧರಣಾ ಸಲಹಾ ಸಮಿತಿ ಸಭೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ಮಾತನಾಡಿ ಈಗಾಗಲೇ ಜಮೀನು ನೀಡಿರುವ ರೈತರು ಸುಮಾರು 25 ವರ್ಷಗಳಿಂದ ಪರಿಹಾರ ಪಡೆಯದೇ ಅನುಭವಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಅದೇ ರೀತಿ ರೈತರ ಪರಿಹಾರದ ಕುರಿತ ಬೇಡಿಕೆಗಳನ್ನು ಕೈಗಾರಿಕಾ ಸಚಿವರು ಮತ್ತು ಮುಖ್ಯ ಮಂತ್ರಿಗಳ ಜೊತೆಯಲ್ಲಿ ಚರ್ಚೆ ನಡೆಸಿರುವುದಾಗಿ ತಿಳಿಸಿದರು.
ಕಾರವಾರ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿರುವುದರಿಂದ ಸ್ಥಳೀಯರು ಉದ್ಯೋಗ ಹುಡುಕಿ ಗೋವಾಕ್ಕೆ ಹೋಗುವ ಪರಿಸ್ಥಿತಿ ಇದೆ ಇಲ್ಲಿ ಕೈಗಾರಿಕೆಗಳು ನಿರ್ಮಾಣಗೊಂಡು ಇಲ್ಲೇ ಉದ್ಯೋಗಾವಕಾಶ ಸೃಷ್ಟಿಯಾಗಲಿ ಎಂಬ ಉದ್ದೇಶದಿಂದ ರೈತರು ತಮ್ಮ ಜಮೀನು ನೀಡಿದ್ದಾರೆ ಶೀಘ್ರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳುವ ಮೂಲಕ ಜಮೀನು ನೀಡಿರುವ ಕುಟುಂಬದ ಸದಸ್ಯರಿಗೆ ನೌಕರಿ ದೊರಕುವಂತಾಗಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಾಳಿಕಟ್ಟಿ ಮುಡಗೇರಿ ಗ್ರಾಮದ ರೈತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.