ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಸಂಗೀತ ನಿರ್ದೇಶಕ ಹಾಗೂ ರಾಜ್ಯಸಭೆಯ ಬಿಜೆಪಿ ಸಂಸದ ಇಳಯರಾಜಾ ಅವರ ಪುತ್ರಿ ಭವತಾರಿಣಿ ನಿಧನರಾಗಿದ್ದಾರೆ.
ವರದಿಗಳ ಪ್ರಕಾರ, ಅವರು ಲಿವರ್ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯಲು ಶ್ರೀಲಂಕಾಕ್ಕೆ ತೆರಳಿದ್ದರು. ಆದರೆ, ಶ್ರೀಲಂಕಾದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಆಕೆಯ ಪಾರ್ಥಿವ ಶರೀರವನ್ನು ಜನವರಿ 26 ರಂದು ಚೆನ್ನೈಗೆ ತರಲಾಗುತ್ತಿದೆ. ಅಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ.
ಭವತಾರಿಣಿಗೆ 47 ವರ್ಷ ವಯಸ್ಸಾಗಿತ್ತು. ಇಳಯರಾಜಾ ಅವರ ಪುತ್ರಿಯಾಗಿರುವ ಭವತಾರಿಣಿ, ಕಾರ್ತಿಕ್ ರಾಜಾ ಹಾಗೂ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಅವರ ಸಹೋದರಿಯಾಗಿದ್ದರು. ಅವರು ‘ಭಾರತಿ’ ಚಿತ್ರದ ‘ಮಾಯಿಲ್ ಪೋಲ ಪೊನ್ನು ಒನ್ನು’ ತಮಿಳು ಹಾಡಿಗಾಗಿ ಅತ್ಯುತ್ತಮ ಹಿನ್ನಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದರು.
ಇಳಯರಾಜ ಅವರ ಪುತ್ರಿ ಭವತಾರಿಣಿ ಹಿನ್ನೆಲೆ ಗಾಯಕಿ ಮತ್ತು ಸಂಗೀತ ಸಂಯೋಜಕಿಯೂ ಆಗಿದ್ದರು. ಕಳೆದ ಆರು ತಿಂಗಳಿಂದ ಲಿವರ್ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗಷ್ಟೇ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಲಂಕಾಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಭವತಾರಣಿ ಕೊನೆಯುಸಿರೆಳೆದಿದ್ದಾರೆ.