ಹೊಸದಿಗಂತ ವರದಿ, ದಾವಣಗೆರೆ:
ಜಿಲ್ಲೆಯ ಹೊನ್ನಾಳಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಪುತ್ರನಿಗೆ ಎರಡು ಪ್ರತ್ಯೇಕ ನಂಬರ್ ಗಳಿಂದ ಪ್ರಾಣ ಬೆದರಿಕೆ ಕರೆಗಳು ಬಂದ ಘಟನೆ ಸೋಮವಾರ ವರದಿಯಾಗಿದೆ.
ಬಿಜೆಪಿ ಮಾಜಿ ಸಚಿವ ರೇಣುಕಾಚಾರ್ಯ ಮೊಬೈಲ್ ಗೆ ಅಂತಾರಾಷ್ಟ್ರೀಯ ಕರೆ ಮಾಡಿರುವ ಅನಾಮಿಕ ವ್ಯಕ್ತಿಗಳು, ಸೋಮವಾರ ರಾತ್ರಿಯೊಳಗೆ ನಿನಗೆ ಹಾಗೂ ನಿನ್ನ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಈ ಬಗ್ಗೆ ರೇಣುಕಾಚಾರ್ಯ ಕುಟುಂಬ ಆತಂಕಕ್ಕೆ ಒಳಗಾಗಿದೆ. ತಮಗೆ ಪ್ರಾಣ ಬೆದರಿಕೆ ಹಾಕಿರುವ ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರೇಣುಕಾಚಾರ್ಯ, ಸೋಮವಾರ ಸಂಜೆ ತಮ್ಮ ಬೆಂಬಲಿಗರೊಂದಿಗೆ ಹೊನ್ನಾಳಿ ಪೊಲೀಸ್ ಠಾಣೆಗೆ ತೆರಳಿ, ತಮಗೆ ಕರೆ ಬಂದ ಮೊಬೈಲ್ ನಂಬರ್ ಗಳ ಸಮೇತ ದೂರು ದಾಖಲು ಮಾಡಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಹೊನ್ನಾಳಿ, ನ್ಯಾಮತಿಯಲ್ಲಿ ನಾನು ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಮವಾರ ಬೆಳಿಗ್ಗೆಯಿಂದ ತೊಡಗಿದ್ದೆ. ಮಧ್ಯಾಹ್ನ 12.52ಕ್ಕೆ ನ್ಯಾಮತಿಗೆ ಹೋಗಿದ್ದಾಗ ನನಗೆ ಅಂತಾರಾಷ್ಟ್ರೀಯ ಕರೆ ಬಂದಿತ್ತು. ಮಿಸ್ಡ್ ಕಾಲ್ ಆಗಿದ್ದರಿಂದ ನಾನು ಕರೆ ಸ್ವೀಕರಿಸಲಿಲ್ಲ. ಮತ್ತೆ 12.53ಕ್ಕೆ ಕರೆ ಬಂದಿತು. ಆಗ ಕನ್ನಡದಲ್ಲೇ ಮಾತನಾಡಿದ ಅಪರಿಚಿತ ವ್ಯಕ್ತಿಯು ಇವತ್ತೇ ನಿನಗೆ ಕೊನೆಯ ದಿನ. ನಿನ್ನ ಮಗನಿಗೂ ಮುಗಿಸುತ್ತೇನೆಂಬುದಾಗಿ ಬೆದರಿಕೆ ಹಾಕಿದ ಎಂದು ದೂರಿದರು.
ನಂತರ ಯಾರೋ ನೀನು ಎಂಬುದಾಗಿ ನಾನು ಪ್ರಶ್ನಿಸಿದೆ. ತಕ್ಷಣ ಅಪರಿಚಿತ ವ್ಯಕ್ತಿಯು ಕರೆ ಕಟ್ ಮಾಡಿದ್ದಾನೆ. ಎರಡೂ ಕರೆಗಳ ಪೈಕಿ ಒಂದು ಕರೆಯನ್ನು ಮಲೇಷ್ಯಾದಿಂದ ಮಾಡಿದ್ದು ಎಂಬ ಮಾಹಿತಿ ಇದೆ. ಇನ್ನೊಂದು ಕರೆ ಎಲ್ಲಿಂದ ಬಂದಿದ್ದೆಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನ್ಯಾಮತಿ, ಹೊನ್ನಾಳಿ ಸಿಪಿಐಗಳ ಗಮನಕ್ಕೆ ಈ ವಿಚಾರವನ್ನು ತಂದಿದ್ದೇನೆ. ಈಗ್ಗೆ 2 ವರ್ಷದ ಹಿಂದೆಯೂ ಬೆಂಗಳೂರಿನಲ್ಲಿದ್ದಾಗ ಇದೇ ರೀತಿಯ ಕರೆ ಬಂದಿತ್ತು. ಆಗ ಸದಾಶಿವ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಈಗ ಮತ್ತೆ ನ್ಯಾಮತಿ, ಹೊನ್ನಾಳಿಯ ಠಾಣೆಗೆ ದೂರು ನೀಡಿದ್ದೇನೆ ಎಂದು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಕರೆ ಮಾಡಿ, ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ದಾವಣಗೆರೆ ಇಂಟಲಿಜೆನ್ಸಿ ಪೊಲೀಸ್ ಅಧಿಕಾರಿಗಳು ನನಗೆ ಕರೆ ಮಾಡಿ, ಮಾಹಿತಿ ಪಡೆದಿದ್ದಾರೆ. ಮಲೇಷ್ಯಾದಿಂದದ ಕರೆ ಬಂದಿದ್ದು ಎಂಬುದಾಗಿ ಪೊಲೀಸರು ಹೇಳುತ್ತಿದ್ದಾರೆ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಇಡೀ ದಿನ ನಾನು ನ್ಯಾಮತಿ, ಕೊಡತಾಳ್, ಕುಂಕುವ, ಆರುಂಡಿ ಗ್ರಾಮಕ್ಕೆಲ್ಲಾ ಹೋಗಿ, ಸಂಜೆ ಹೊನ್ನಾಳಿಗೆ ಬಂದೆ. ಈಗ ಸಂಜೆ 4 ಗಂಟೆ ನಂತರ ಹೊನ್ನಾಳಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದೇನೆ ಎಂದು ಅವರು ಹೇಳಿದರು.
ಹಿಂದಿನಿಂದಲೂ ನನಗೆ ಬೆದರಿಕೆ ಕರೆಗಳು ಬರುತ್ತವೇ ಇವೆ. ಕಳೆದ 15-20 ವರ್ಷದಿಂದಲೂ ನನಗೆ ಬೆದರಿಕೆ ಇದ್ದೇ ಇದೆ. ಹಿಂದೆಲ್ಲಾ ನನ್ನ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದರು. ನೇರಾ ನೇರವಾಗಿ ಅಟ್ಯಾಕ್ ಮಾಡಿದರು. ಶಾಮಿಯಾನಕ್ಕೆ ಬೆಂಕಿ ಹಾಕಿದರು. ವಾಹನಕ್ಕೆ ಧಕ್ಕೆ ಮಾಡಿದರು. ರಾಜಕಾರಣದಲ್ಲಿರುವ ನಾನು ಇಂತಹದ್ದಕ್ಕೆಲ್ಲಾ ಹೆದರಲ್ಲ, ಜಗ್ಗಲ್ಲ, ಬಗ್ಗಲ್ಲ. ಹೊನ್ನಾಳಿ, ನ್ಯಾಮತಿ ತಾಲೂಕಿನ ಜನತೆ ನನ್ನ ರಕ್ಷಣೆ ಮಾಡಿದ್ದಾರೆ. ರಾತ್ರೋರಾತ್ರಿ ನನ್ನ ರಕ್ಷಣೆಗೆ ಮುಖಂಡರು, ಕಾರ್ಯಕರ್ತರು ನಿಂತಿದ್ದಾರೆ. ಪೊಲೀಸರು ರಕ್ಷಣೆ ನೀಡುತ್ತೇವೆಂದಿದ್ದಾರೆ. ನನ್ನ ರಕ್ಷಣೆಗೆ ಎಲ್ಲರೂ ಇದ್ದಾರೆ. ಯಾರೋ ಅಪರಿಚತರು ಎಲ್ಲೋ ತಲೆ ಮರೆಸಿಕೊಂಡು ಕುಳಿತು, ಬೆದರಿಕೆ ಕರೆ ಮಾಡಿದರೆ ಹೆದರುವ ವ್ಯಕ್ತಿ ನಾನಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಂತಾರಾಷ್ಟ್ರೀಯ ಕರೆಯ ಜಾಡು ಹಿಡಿದು, ತನಿಖೆ ಕೈಗೊಳ್ಳಲಿದ್ದಾರೆ. ಪದೇಪದೇ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯಗೆ ಬೆದರಿಕೆ ಕರೆ ಬರುತ್ತಿರುವುದು ಕಾಯಕರ್ತರ ಆಕ್ರೋಶಕ್ಕೂ ಕಾರಣವಾಗಿದೆ. ಆದಷ್ಟು ಬೇಗನೆ ಆರೋಪಿಗಳನ್ನು ಪತ್ತೆ ಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕು. ಮಾಜಿ ಸಚಿವ ರೇಣುಕಾಚಾರ್ಯ ಮತ್ತವರ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಬಿಜೆಪಿ ಮುಖಂಡರು, ಕಾರ್ಯಕರ್ತರು ಒತ್ತಾಯಿಸಿದ್ದಾರೆ.