ಹೊಸದಿಗಂತ ವರದಿ, ಶಿವಮೊಗ್ಗ:
ವಿಪರೀತ ರಾಸಾಯನಿಕ ಬಳಕೆಯಿಂದ ನಾವು ತಿನ್ನುವ ಅನ್ನ ವಿಷವಾಗುತ್ತಿದೆ. ರೈತರು ಬೆಳೆಯುವ ಬೆಳೆಯನ್ನು ವಿಷಮುಕ್ತವಾಗಿಸುವ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಇರುವಕ್ಕಿಯಲ್ಲಿ ಸೋಮವಾರ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ 10ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಬೆವರು ಸುರಿಸಿ ದೇಶಕ್ಕೆ ಆಹಾರ ಭದ್ರತೆ ಒದಗಿಸುತ್ತಿರುವ ರೈತ ಸ್ವಾಭಿಮಾನದ ಬದುಕು ನಡೆಸುವಂತೆ ಆಗಬೇಕು ಎಂದು ಹೇಳಿದರು.
ಅನೇಕ ಮಹತ್ತರ ಉದ್ದೇಶಗಳನ್ನು ಇರಿಸಿಕೊಂಡು ಇರುವಕ್ಕಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗಿದೆ. ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಮೂಲಕ ರೈತರು ಪ್ರಸ್ತುತ ಎದುರಿಸುತ್ತಿರುವ ಕೃಷಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮಹತ್ತರ ಸಂಶೋಧನೆಗಳು ಇನ್ನಷ್ಟು ನಡೆಯಬೇಕು. ಈ ವಿಶ್ವವಿದ್ಯಾಲಯ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ನಿಟ್ಟಿನಲ್ಲಿ ಬೇಕಾದ ಅಗತ್ಯ ಮೂಲ ಸೌಲಭ್ಯವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸಾನಿಧ್ಯ ವಹಿಸಿ ಮಾತನಾಡಿದ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳು, ಹೊಸಹೊಸ ಸಂಶೋಧನೆಗಳ ಮೂಲಕ ರೈತರ ಕೃಷಿ ಸಮಸ್ಯೆಯಿಂದ ಹೊರಗೆ ತರುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ. ಭೂಮಿಕಾ ಎಚ್.ಆರ್., ಡಾ. ಸಿ. ಸುನೀಲ್, ಡಾ. ಚೈತನ್ಯ ಎಚ್.ಎಸ್., ಡಾ. ಪ್ರಕಾಶ್ ಕೆರೂರು, ಬಸವರಾಜ್ ನಾಯ್ಕ್ ಟಿ., ರಮೇಶ್ ಮೋಲ್ಯಾ, ನಾಗೇಶ್, ವನಜಾ ಅವರನ್ನು ಸನ್ಮಾನಿಸಲಾಯಿತು. ಡಾ. ನಾರಾಯಣ ಎಸ್.ಎಂ., ವಿದ್ಯಾ, ಶ್ವೇತಾ, ವಿನಯ ಕಲ್ಲನ ಗೌಡ, ಮಂದಿರ ಎಂ., ಮೇಘನಾ ಜಿ.ಕೆ., ವಿದ್ಯಾ ಎನ್., ಸ್ವಾತಿ ಎಚ್.ಎನ್. ಅವರನ್ನು ಅಭಿನಂದಿಸಲಾಯಿತು.
ಕುಲಪತಿ ಡಾ. ಆರ್.ಸಿ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕರಾದ ದೊಡ್ಡೆಗೌಡ ಸಿ. ಪಾಟೀಲ್, ಕೆ.ನಾಗರಾಜ್, ಡಾ. ಎಂ.ದಿನೇಶಕುಮಾರ್, ಡಾ. ಎನ್.ಶಿವಶಂಕರ್, ಡಾ. ತಿಪ್ಪೇಶ್, ಡಾ. ಸಿ.ಜೆ. ಕುಶಾಲಪ್ಪ, ಡಾ. ಬಿ.ಎಂ.ದುಶ್ಯಂತ ಕುಮಾರ್, ಡಾ. ಕೆ.ಸಿ. ಶಶಿಧರ್ ಹಾಜರಿದ್ದರು.