ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರಿ ಪಂಡಿತರ ಉದ್ದೇಶಿತ ಕೊಲೆಗಳು ಹೆಚ್ಚುತ್ತಿರುವ ಬೆನ್ನಲ್ಲೇ ನಿರಾಶ್ರಿತ ಕಾಶ್ಮೀರಿ ಪಂಡಿತರ ಸಮುದಾಯಕ್ಕೆ ಸೇರಿದ 117 ಜನ ಶಿಕ್ಷಕರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕಾಶ್ಮೀರಿ ಪಂಡಿತ್ ಸಮುದಾಯವನ್ನು ಉದ್ದೇಶಿಸಿ ಕೊಲೆಗಳಾಗುತ್ತಿರುವ ಕುರಿತು ಕೇಂದ್ರಾಡಳಿತ ಪ್ರದೇಶದಲ್ಲಿನ ಪ್ರಕ್ಷುಬ್ಧ ವಾತಾವರಣದ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಉನ್ನತಮಟ್ಟದ ಸಭೆ ನಡೆಸಿದ ನಂತರ ಈ ಆದೇಶ ಹೊರಬಿದ್ದಿದೆ ಎಂದು ಮೂಲಗಳು ವರದಿ ಮಾಡಿವೆ.
ಪ್ರಧಾನ ಮಂತ್ರಿಗಳ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಉದ್ಯೋಗಿಯಾಗಿದ್ದ ನಿರಾಶ್ರಿತ ಕಾಶ್ಮೀರಿ ಪಂಡಿತರ ಪೈಕಿ ರಾಹುಲ್ ಭಟ್, ಅಮ್ರೀನ್ ಭಟ್, ರಜನಿಬಾಲಾ ಸೇರಿದಂತೆ ಹಲವರ ಕೊಲೆಗಳಾಗಿದ್ದವು. ಜೊತೆಗೆ ಕಾಶ್ಮೀರ ಪಂಡಿತರಿಗೆ ಹಲವು ರೀತಿಯ ಬೆದರಿಕೆಗಳು ಬರುತ್ತಿದ್ದವು. ಇದನ್ನು ವಿರೋಧಿಸಿ ಮತ್ತು ತಮ್ಮನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವಂತೆ ಕೋರಿ ಸುಮಾರು 6,000 ಕಾಶ್ಮೀರಿ ಪಂಡಿತ ಉದ್ಯೋಗಿಗಳು ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.