ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಇಂಡಿಯನ್ಸ್ ಭಾನುವಾರ ಈ ಬಾರಿಯ ಐಪಿಎಲ್ ನ ಮೊದಲ ಪಂದ್ಯವಾಡಿದ್ದು, ತಂಡದ ನಾಯಕರಾದ ಹಾರ್ದಿಕ್ ಪಾಂಡ್ಯ ಮುಂದಾಳತ್ವದಲ್ಲಿ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದೆ.
17ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ಗೆ 5 ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕ ಪಟ್ಟ ಕಟ್ಟಲಾಗಿತ್ತು.
ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟಾನ್ಸ್ ಎದುರು ರೋಚಕ ಸೋಲು ಅನುಭವಿಸಿದೆ. ಇದೀಗ ಈ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ಮಾಡುವ ವಿಚಾರದಲ್ಲಿ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಹಾರ್ದಿಕ್ ಪಾಂಡ್ಯ ಬೌಂಡರಿ ಗೆರೆ ಬಳಿಗೆ ಕಳಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇದರ ಬೆನ್ನಲ್ಲೇ ನೆಟ್ಟಿಗರು ಗರಂ ಆಗಿದ್ದಾರೆ.
ಪಂದ್ಯದ ವೇಳೆ ರೋಹಿತ್ ಶರ್ಮಾ ರಿಂಗ್ನೊಳಗೆ ಫೀಲ್ಡಿಂಗ್ ಮಾಡುತ್ತಿದ್ದರು. ಈ ಸಂದರ್ಭ ನೂತನ ನಾಯಕ ಹಾರ್ದಿಕ್ ಪಾಂಡ್ಯ, ರೋಹಿತ್ಗೆ 30 ಯಾರ್ಡ್ಸ್ ಸರ್ಕಲ್ನಿಂದ ಬೌಂಡರಿ ಗೆರೆ ಬಳಿ ಹೋಗಿ ಕ್ಷೇತ್ರರಕ್ಷಣೆ ಮಾಡಲು ಹೇಳುತ್ತಾರೆ. ಲಾಂಗ್ ಆನ್ನತ್ತ ತೆರಳುವಂತೆ ರೋಹಿತ್ ಶರ್ಮಾಗೆ ಸೂಚಿಸಿದಾಗ, ಗೊಂದಲದಿಂದ ನಾನಾ ಎಂದು ಕೇಳುತ್ತಿರುವುದು ಕೂಡ ಕಂಡು ಬಂತು. ಹೌದು ನೀನೇ, ಬೌಂಡರಿ ಲೈನ್ನತ್ತ ಹೋಗು ಎಂದು ಹಾರ್ದಿಕ್ ಪಾಂಡ್ಯ ಕೈಸನ್ನೆ ಮಾಡಿದರು.
No fans of Rohit Sharma will pas without liking this post..😂😂#HardikPandya#RohitSharma#RohitSharma𓃵#chapri pic.twitter.com/CgCV17ShAO
— 👑RD चौधरी 👑 (@RD_CHOUDHARY07) March 25, 2024
ಹಾರ್ದಿಕ್ ಪಾಂಡ್ಯ ಸೂಚನೆಯನ್ನು ಪಾಲಿಸಿ ರೋಹಿತ್ ಶರ್ಮಾ ಓಡುತ್ತಲೇ ಬೌಂಡರಿ ಗೆರೆ ಬಳಿ ಹೋಗುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಹಾರ್ದಿಕ್ ಪಾಂಡ್ಯ ಅವರ ಈ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದೆ.ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಇದಲ್ಲ ಎಂದು ನೆಟ್ಟಿಗರು ಪಾಂಡ್ಯ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.