ಹೊಸದಿಗಂತ ವರದಿ,ಮೈಸೂರು:
ಕಾಡಾನೆಯೊಂದಗಿನ ಕಾದಾಟದಲ್ಲಿ ನಾಡ ಹಬ್ಬ ಮೈಸೂರು ದಸರಾದ ಆನೆಯಾದ ಗೋಪಾಲಸ್ವಾಮಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಮತ್ತಿಗೂಡು ಆನೆ ಶಿಬಿರದಲ್ಲಿದ್ದ ಗೋಪಾಲಸ್ವಾಮಿಯನ್ನು ಎಂದಿನoತೆ ಮೇಯಲೆಂದು ಕಾಡಿಗೆ ಬಿಡಲಾಗಿತ್ತು. ಈ ವೇಳೆ ವಾತಾವರಣದಿಂದಾಗಿ ಮದವೇರಿದ್ದ ಗೋಪಾಲಸ್ವಾಮಿ ಮತ್ತೊಂದು ಕಾಡಾನೆಯೊಂದಿಗೆ ಕಾದಾಟ ನಡೆಸಿದ್ದಾನೆ. ಇದರಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ. ಇದನ್ನು ಗಮನಿಸಿದ ಮಾವುತ ಆನೆ ವೈದ್ಯರಿಗೆ ಮಾಹಿತಿ ನೀಡಿದ್ದ. ಸ್ಥಳಕ್ಕೆ ಧಾವಿಸಿದ್ದ ವೈದ್ಯರು ಗೋಪಾಲಸ್ವಾಮಿ ಚಿಕಿತ್ಸೆಯನ್ನು ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
2009ರಲ್ಲಿ ಗೋಪಾಲಸ್ವಾಮಿಯನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಾರೆಕೊಪ್ಪಿ ಅರಣ್ಯದಲ್ಲಿ ಸೆರೆಹಿಡಿಯಲಾಗಿತ್ತು. ಪುಂಡಾನೆಗಳು ಹಾಗೂ ಜನರಿಗೆ ಉಪಟಳ ನೀಡುತ್ತಿದ್ದ ಹುಲಿಗಳನ್ನು ಸೆರೆ ಹಿಡಿಯುವ ಹಲವು ಕಾರ್ಯಚರಣೆಯಲ್ಲಿ ಗೋಪಾಲಸ್ವಾಮಿ ಭಾಗವಹಿಸಿದ್ದ. ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಾ ಬಂದಿದ್ದ. ಈ ಬಾರಿ ಬಂದಾಗ ಆತನಿಗೆ 41 ವರ್ಷ ವಯಸ್ಸಾಗಿತ್ತು. 2.85 ಮೀಟರ್ ಎತ್ತರ, 3.42 ಮೀಟರ್ ಉದ್ದವಿದ್ದ ಈತ 5140 ಕೆ.ಜಿ.ತೂಕವಿದ್ದ. ಭವಿಷ್ಯದಲ್ಲಿ ಚಿನ್ನದ ಅಂಬಾರಿಯನ್ನು ಹೊರುವವನಿದ್ದ.