ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಬೊಗ್ರಿಬೈಲಿನಲ್ಲಿರುವ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದ ಕಸ ಸಂಗ್ರಹಣಾ ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಗ್ರಹಿಸಿದ ಕಸದ ರಾಶಿ ಸುಟ್ಟು ಕರಕಲಾದ ಘಟನೆ ನಡೆದಿದೆ.
ರವಿವಾರ ಮದ್ಯಾಹ್ನ ಕಸದ ರಾಶಿಗೆ ಬೆಂಕಿ ಹೊತ್ತಿಕೊಂಡು ಉರಿದಿದ್ದು ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ವಸ್ತುಗಳಿಗೆ ಬೆಂಕಿ ತಗುಲಿ ಕಸ ಸಂಗ್ರಹಣಾ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿಕೊಂಡಿದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ಸುತ್ತ ಮುತ್ತಲಿನ ಗಿಡ ಮರಗಳಿಗೆ ವ್ಯಾಪಿಸದಂತೆ ಕ್ರಮಗಳನ್ನು ಕೈಗೊಂಡು ಕಸದ ರಾಶಿಗೆ ವ್ಯಾಪಿಸಿರುವ ಅಗ್ನಿಜ್ವಾಲೆ ನಿಯಂತ್ರಣಕ್ಕೆ ತರಲು ಹರ ಸಾಹಸ ಪಡುವಂತಾಯಿತು.
ಅಗ್ನಿ ಶಾಮಕ ವಾಹನದಲ್ಲಿರುವ ನೀರು ಖಾಲಿಯಾದರೂ ಬೆಂಕಿಯ ಜ್ವಾಲೆ ಆವರಿಸುತ್ತಲೇ ಇದ್ದರಿಂದ ಟ್ಯಾಂಕ್ ಮೂಲಕ ನೀರು ತಂದು ಬೆಂಕಿ ಆರಿಸಲು ಕ್ರಮಗಳನ್ನು ಕೈಗೊಳ್ಳಲಾಯಿತಲ್ಲದೇ ಅಗ್ನಿಶಾಮಕ ವಾಹನ ಎರಡನೇ ಬಾರಿ ನೀರು ತುಂಬಿಕೊಂಡು ಬಂದು ಬೆಂಕಿ ನಿಯಂತ್ರಣಕ್ಕೆ ತರಲುಪ್ರಯತ್ನ ನಡೆಸುವಂತಾಯಿತು.
ಸಂಗ್ರಹಿಸಿ ಇಡಲಾದ ಕಸದ ಗುಡ್ಡ ಬೆಂಕಿಯ ಜ್ವಾಲೆಯಲ್ಲಿ ಉರಿದು ಹೋಗಿದ್ದು ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ತಿಳಿದು ಬಂದಿಲ್ಲ.
ಪುರಸಭೆ ಅಧ್ಯಕ್ಷ ಸೂರಜ್ ನಾಯ್ಕ, ಮುಖ್ಯಾಧಿಕಾರಿ ಎಚ್. ಅಕ್ಷತಾ, ಪುರಸಭೆ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಿಯಂತ್ರಣಕ್ಕೆ ತರಲು ಕ್ರಮಗಳನ್ನು ಕೈಗೊಂಡರು.