ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ರಾಮಮಂದಿರದಲ್ಲಿ ಗುಂಡಿನ ಸದ್ದು ಕೇಳಿಸಿದ್ದು, ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್ಎಸ್ಎಫ್ ಯೋಧ ಗುಂಡಿಗೆ ಬಲಿಯಾಗಿದ್ದಾರೆ.
ಇಂದು ಬೆಳಗ್ಗೆ 5.25ಕ್ಕೆ ಯೋಧ ಶತ್ರುಘ್ನ ವಿಶ್ವಕರ್ಮ ಎನ್ನುವವರ ಮೇಲೆ ಗುಂಡಿನ ದಾಳಿಯಾಗಿದೆ. 25 ವರ್ಷದ ಶತ್ರುಘ್ನ ಅಂಬೇಡ್ಕರ್ ನಗರದ ನಿವಾಸಿ, ಗುಂಡಿನ ಸದ್ದು ಕೇಳಿದ ಬಳಿಕ ಸಹ ಸಿಬ್ಬಂದಿ ಅಲ್ಲಿಗೆ ಬಂದು, ಯೋಧನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಶತ್ರುಘ್ನ ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ.
ಯೋಧನ ಸಾವು ಅಯೋಧ್ಯೆ ದೇಗುಲ ಸಂಕೀರ್ಣದಲ್ಲಿ ಸಂಚಲನ ಮೂಡಿಸಿದೆ. ಘಟನಾ ಸ್ಥಳಕ್ಕೆ ಐಜಿ, ಎಸ್ಪಿ ಹಾಗೂ ಫೋರೆನ್ಸಿಕ್ ಆಗಮಿಸಿ ಪರಿಶೀಲನೆ ನಡೆಸಿದ್ದು, ಇದು ಆತ್ಮಹತ್ಯೆಯಾ ಅಥವಾ ಕೊಲೆಯಾ ಎನ್ನುವ ನಿಟ್ಟಿನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಗೂ ಮುನ್ನ ಶತ್ರುಘ್ನ ಮೊಬೈಲ್ ನೋಡುತ್ತಿದ್ದ ಎಂದು ಮೃತ ಯೋಧನ ಸಹೋದ್ಯೋಗಿಗಳು ತಿಳಿಸಿದ್ದಾರೆ. ಅವರು ಕೆಲವು ದಿನಗಳಿಂದ ಯಾವುದೋ ಚಿಂತೆಯಲ್ಲಿದ್ದರು ಎಂಬುದಾಗಿ ತಿಳಿಸಿದ್ದಾರೆ, ಪೊಲೀಸರು ಅವರ ಮೊಬೈಲ್ ಅನ್ನು ಕೂಡ ವಿಚಾರಣೆಗೆ ಕಳುಹಿಸಿದ್ದಾರೆ. ಮೃತ ಯೋಧನ ಕುಟುಂಬಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರು ಸ್ಥಳಕ್ಕೆ ತಲುಪಿದ್ದಾರೆ.