ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಆಡಳಿತರಾಢ DMK ಪಕ್ಷದ ಇತಿಹಾಸದಲ್ಲೇ ಮೊದಲು ಎಂಬಂತೆ ಪಕ್ಷದ ಮುಖಂಡ ಹಾಗೂ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ‘ದೀಪಾವಳಿ ಹಬ್ಬದ ಶುಭಾಶಯ’ ಕೋರಿದ್ದಾರೆ.
ಹಬ್ಬಕ್ಕೆ ಶುಭ ಕೋರುವುದು ಎಲ್ಲ ರಾಜಕೀಯ ನಾಯಕರ ಸಾಮಾನ್ಯ ನಡೆಯೇ ಆದರೂ, ಇದು ಡಿಎಂಕೆ ಪಕ್ಷದಲ್ಲಿ ಅತಿ ಅಪರೂಪದ ನಡೆಯಾಗಿದೆ.
ದಿವಂಗತ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿಯಿಂದ ಈಗಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವರೆಗೂ ಯಾವುದೇ ಡಿಎಂಕೆ ನಾಯಕ ಕೂಡ ಹಬ್ಬಕ್ಕೆ ಶುಭ ಕೋರಿರಲಿಲ್ಲ. ಡಿಎಂಕೆಯ ದಿವಂಗತ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಸೇರಿದಂತೆ ಡಿಎಂಕೆ ನಾಯಕರು ತಮ್ಮ ವೈಚಾರಿಕ ನಂಬಿಕೆಗಳಿಗೆ ಅನುಗುಣವಾಗಿ ಈವರೆಗೂ ದೀಪಾವಳಿಯಂದು ಜನರಿಗೆ ಶುಭಾಶಯ ಕೋರಿರಲಿಲ್ಲ.ಡಿಎಂಕೆ ನಾಯಕರು ಕರುಣಾನಿಧಿ ಅವರು ಆರಂಭಿಸಿದ್ದ ಈ ನಿಯಮವನ್ನು ತಪ್ಪದೇ ಪಾಲಿಸಿಕೊಂಡು ಬಂದಿದ್ದರು. ಇದೀಗ ಈ ಸಂಪ್ರದಾಯನ್ನು ಉದಯನಿಧಿ ಸ್ಟಾಲಿನ್ ಮುರಿದಿದ್ದಾರೆ.
ಶನಿವಾರದಂದು ಚೆನ್ನೈನಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ, ಪಕ್ಷದ ಪ್ಲಾಟಿನಂ ಜುಬಿಲಿ ಆಚರಣೆ ಸಂದರ್ಭದಲ್ಲಿ ಬೆಂಬಲಿಗರಿಗೆ ತಮ್ಮ ಶುಭಾಶಯಗಳನ್ನು ತಿಳಿಸುವ ಸಂದರ್ಭದಲ್ಲಿ, ಉದಯನಿಧಿ ಅವರು “ದೀಪ ಒಲಿ ತಿರುನಾಳ್” ಗಾಗಿ ಜನರಿಗೆ ಶುಭಾಶಯ ಕೋರಿದ್ದು, “ನಮ್ಮ (ಡಿಎಂಕೆ) ಪ್ಲಾಟಿನಂ ಜುಬಿಲಿ ಆಚರಣೆಗಳಿಗೆ ನಾನು ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ; ಅಂತೆಯೇ ನಂಬುವ ಮತ್ತು ಆಚರಿಸುವವರಿಗೆ ದೀಪ ಓಲಿ ತಿರುನಾಳ್ ಶುಭಾಶಯಗಳು” ಎಂದು ಅವರು ಹೇಳಿದರು.
ದ್ರಾವಿಡವನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ತಮಿಳುನಾಡು ತಮಿಳುನಾಡು ಆಗಿಯೇ ಉಳಿಯುತ್ತದೆ. ನಮ್ಮ ಕಪ್ಪು ಮತ್ತು ಕೆಂಪು (ಡಿಎಂಕೆ) ಧ್ವಜ ಮತ್ತು ಡಿಎಂಕೆ ಕಾರ್ಯಕರ್ತರು ಇರುವವರೆಗೂ ಯಾರೂ ತಮಿಳುನಾಡು ಮತ್ತು ದ್ರಾವಿಡಂ ಅನ್ನು ಮುಟ್ಟಲೂ ಸಾಧ್ಯವಿಲ್ಲ ಎಂದು ಉದಯನಿಧಿ ಸ್ಟಾಲಿನ್ ಹೇಳಿದರು.