ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕನ್ನಡದ ಶಿರಸಿಯ ಶಾಲ್ಮಲಾ ನದಿಗೆ ಬಿದ್ದ ಮಗುವನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಕಾರ್ಯಾಚರಣೆಯ ನಂತರ ಐವರ ಮೃತದೇಹವೂ ಪತ್ತೆಯಾಗಿದೆ.
ಶಿರಸಿಯ ಮೊಹಮ್ಮದ್ ಸಲೀಂ ಕಲೀಲ್, ನಾದಿಯಾ ನೂರ್ ಅಹಮದ್ ಶೇಖ್, ಮಿಸ್ಬಾ ತಬಸ್ಸುಮ್, ನಬಿಲ್ ನೂರ್ ಅಹಮಸ್ ಶೇಖ್ ಹಾಗೂ ಉಮರ್ ಸಿದ್ದಿಖ್ ಮೃತರು.
ಒಂದೇ ಕುಟುಂಬದ ಸುಮಾರು 25 ಮಂದಿ ಶಾಲ್ಮಲಾ ನದಿ ಬಳಿ ಆಗಮಿಸಿದ್ದಾರೆ. ಅಲ್ಲೇ ಅಡುಗೆ ತಯಾರಿಸಿ ಕೆಲ ಸಮಯ ಕಳೆದು ಹೋಗಲು ಕುಟುಂಬ ಬಂದಿತ್ತು. ಆಟವಾಡುವ ವೇಳೆ ಮಗು ನೀರಿಗೆ ಬಿದ್ದಿದೆ. ತಕ್ಷಣವೇ ಮೊಹಮ್ಮದ್ ಸಲೀಂ ಕಲೀಲ್ ಮಗುವನ್ನು ರಕ್ಷಿಸಿ ನಾದಿಯಾಗೆ ನೀಡಿದ್ದಾರೆ. ಮಗುವನ್ನು ದಡಕ್ಕೆ ಬಿಟ್ಟು ಬರುವ ವೇಳೆ ನಾದಿಯಾ ಹಾಗೂ ಮೊಹಮ್ಮದ್ ಕಾಲು ಜಾರಿ ಮುಳುಗಿದ್ದಾರೆ. ಇವರನ್ನು ರಕ್ಷಿಸಲು ಹೋದ ಮೂವರೂ ಮೃತಪಟ್ಟಿದ್ದಾರೆ. ಮಗು ಸುರಕ್ಷಿತವಾಗಿದೆ.
ಮಕ್ಕಳನ್ನು ನೀರಿರುವ ಸ್ಥಳಗಳಿಗೆ ಕರೆದುಕೊಂಡು ಹೋದಾಗ ಹೆಚ್ಚು ಗಮನ ವಹಿಸಬೇಕು, ಮಗು ನೀರಿನ ಬಳಿ ಹೋಗದಿದ್ದರೆ ಅನಾಹುತ ತಪ್ಪಬಹುದಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.