ಹೊಸದಿಗಂತ ಡಿಜಿಟಲ್ ಡೆಸ್ಕ್
ದೆಹಲಿಯ ಅಲಿಪುರ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಗೋಡೌನ್ನ ಗೋಡೆ ಕುಸಿದು ಬಿದ್ದ ಪರಿಣಾಮ ಐವರು ಸಾವನ್ನಪ್ಪಿ ಒಂಬತ್ತು ಮಂದಿ ಗಾಯಗೊಂಡ ದುರಂತ ಸಂಭವಿಸಿದೆ.
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡವು ಅನಧಿಕೃತವಾಗಿ ನಿರ್ಮಾಣವಾಗಿದೆ ಎಂದು ತಿಳಿದುಬಂದಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ನಿರ್ಮಾಣ ಹಂತದಲ್ಲಿರುವ ಗೋದಾಮಿನ ಸುಮಾರು 100 ಅಡಿ ಉದ್ದ ಮತ್ತು 15 ಅಡಿ ಎತ್ತರದ ಗೋಡೆ ಕುಸಿದಿರುವುದು ಕಂಡುಬಂದಿದೆ. ಗೋಡೆಯ ಪಕ್ಕದಲ್ಲಿ ಅಡಿಪಾಯವನ್ನು ಅಗೆಯುತ್ತಿದ್ದ ಸುಮಾರು 20 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತರನ್ನು ಪ್ರಮೋದ್ (45) ಗೋವಿಂದ್ ಪ್ರಸಾದ್ ಅಲಿಯಾಸ್ ಬಬ್ಲು (30); ಪ್ರಮೋದ್ ಕುಮಾರ್ (35), ರಿಷಿಪಾಲ್ (40) ಮತ್ತು ಪ್ರಮೋದ್ (35) ಎಂದು ಗುರುತಿಸಲಾಗಿದೆ.
ಈ ಜಮೀನು ಮಾಲೀಕನನ್ನು ಅಲಿಪುರ ಪ್ರದೇಶದ ಬಕೋಲಿ ನಿವಾಸಿ ಶಕ್ತಿ ಸಿಂಗ್ (40) ಎಂದು ಗುರುತಿಸಲಾಗಿದ್ದು, ಗುತ್ತಿಗೆದಾರ ಸಿಕಂದರ್ ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.