ಹೊಸದಿಗಂತ ವರದಿ ತುಮಕೂರು:
ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮನಕಲಕುವ ಘಟನೆ ತುಮಕೂರಿನಲ್ಲಿ ನಡೆದಿದೆ. ಸದಾಶಿವ ನಗರದಲ್ಲಿ ವಾಸವಿದ್ದ ಕುಟುಂಬವೊಂದು ತಮ್ಮ ಮೂವರು ಮಕ್ಕಳಿಗೂ ನೇಣು ಹಾಕಿ, ತಾವೂ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದಾರೆ.
ಗರೀಬ್ ಸಾಬ್, ಪತ್ನಿ ಸುಮಯ್ಯ, ಮಗಳು ಹಜೀನಾ, ಗಂಡು ಮಕ್ಕಳಾದ ಮೊಹ್ಮದ್ ಶಬೀರ್, ಮೊಹಮದ್ ಮುನೀರ್ ಮೃತ ದುರ್ದೈವಿಗಳು.
ಕುಟುಂಬ ಮೂಲತಃ ಶಿರಾದವರಾಗಿದ್ದು, ಹೊಟ್ಟೆ ಪಾಡಿಗಾಗಿ ತುಮಕೂರಿನಲ್ಲಿ ವಾಸವಿದ್ದರು. ಕಬಾಬ್ ಅಂಗಡಿ ಇಟ್ಟುಕೊಂಡಿದ್ದ ಇವರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ತುಮಕೂರು ಎಸ್ಪಿ ಅಶೋಕ್ ಮಾತನಾಡಿ, ನಮಗೆ ಸಂಜೆ 7.30ಗೆ ಕರೆ ಬಂದಿತ್ತು. ಐದು ನಿಮಿಷಕ್ಕೆ ನಾವು ಭೇಟಿ ನೀಡಿದ್ವಿ, ಇಬ್ಬರ ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಇದ್ದವು. ಮೂವರು ಮಕ್ಕಳ ಮೃತ ದೇಹ ಹಾಸಿಗೆಯಲ್ಲಿದ್ದವು ಎಂದು ತಿಳಿಸಿದ್ದಾರೆ. ಸಾಯುವ ಮುನ್ನ ಸಂಬಂಧಿಕರಿಗೆ ವೀಡಿಯೋ ಮೆಸೇಜ್ ಕಳುಹಿಸಿದ್ದಾರೆ. ಅದರಲ್ಲಿ ಏನು ಮಾಹಿತಿಯಿದೆ ಎಂಬುದನ್ನು ಪರಿಶೀಲನೆ ನಡೆಸುತ್ತೇವೆ. ವೀಡಿಯೋ ಆಧಾರ ಹಾಗೂ ದೂರು ಆಧರಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.