ಹೊಸದಿಗಂತ, ಮಡಿಕೇರಿ:
ಕಾಫಿ ತೋಟದಲ್ಲಿದ್ದ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟಲು ತೆರಳಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನೇ ಬೆನ್ನಟ್ಟಿದ ಘಟನೆ ಶನಿವಾರ ಬೆಳಗ್ಗೆ ಸೋಮವಾರಪೇಟೆ ಬಳಿ ನಡೆದಿದೆ.
ಅದೃಷ್ಟವಶಾತ್ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದು, ಘಟನೆಯಲ್ಲಿ ಅರಣ್ಯ ಸಿಬ್ಬಂದಿಯ ಬೈಕ್ ಹಾನಿಗೀಡಾಗಿದೆ.
ಶನಿವಾರ ಬೆಳಗ್ಗೆ 7.30ರ ಸುಮಾರಿಗೆ ಸೋಮವಾರಪೇಟೆ ಸಮೀಪದ ಕೋವರ್ ಕೊಲ್ಲಿ ಟಾಟಾ ಎಸ್ಟೇಟ್ನಲ್ಲಿ ಕಾಡಾನೆ ಇರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಆರ್.ಆರ್.ಟಿ ತಂಡದ ದರ್ಶನ್, ಹರ್ಷಿತ್, ವಿನೋದ್ ಹಾಗೂ ಅರಣ್ಯ ರಕ್ಷಕ ಶ್ರೀಕಾಂತ್ ಅವರುಗಳು ಕಾಡಾನೆಯನ್ನು ಓಡಿಸಲು ಸ್ಥಳಕ್ಕೆ ತೆರಳಿದ್ದಾರೆ.
ಆದರೆ ಕಾಡಾನೆ ಇವರುಗಳನ್ನೇ ಬೆನ್ನಟ್ಟಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಟಾಟಾ ಎಸ್ಟೇಟ್’ನ ಗೇಟ್’ನ್ನು ಮುರಿದ ಕಾಡಾನೆ, ಅಲ್ಲಿದ್ದ ಅರಣ್ಯ ಸಿಬ್ಬಂದಿಯ ಬೈಕ್’ನ್ನು ಕಾಲಿನಿಂದ ಒದ್ದು ಜಖಂಗೊಳಿಸಿ ಅರಣ್ಯದೊಳಗೆ ಪರಾರಿಯಾಗಿರುವುದಾಗಿ ಹೇಳಲಾಗಿದೆ.