ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದಲ್ಲಿ ಬುಧವಾರ ಭಾರೀ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಅಧಿಕಾರಿಗಳು ಹರಸಾಹಸಪಟ್ಟಿದ್ದಾರೆ. ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರೆದಿದೆ.
ಅಳದಂಗಡಿ ಭಾಗದ ಹೂವಿನಕೊಪ್ಪಲು ಹಾಗೂ ಊರ್ಜಾಲುಬೆಟ್ಟ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಹರಡಿತ್ತು ಎಂದು ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದ ಅರಣ್ಯಾಧಿಕಾರಿ ಸ್ವಾತಿ ಎಲ್ ಹೇಳಿದ್ದಾರೆ.
ವನ್ಯಜೀವಿ ವಲಯ ಪ್ರದೇಶದಲ್ಲಿ ಯಾವ ಕಾರಣದಿಂದ ಬೆಂಕಿ ಉಂಟಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹುಲ್ಲುಗಾವಲು ವ್ಯಾಪ್ತಿಯ ಅಲ್ಲಲ್ಲಿ ಬೆಂಕಿ ಪಸರಿಸಿರುವ ಕುರಿತು ಮಾಹಿತಿ ಇದೆ.
ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ವನ್ಯಜೀವಿ ವಿಭಾಗದ ಬೆಳ್ತಂಗಡಿ ಆರ್ಎಫ್ ಒ ಸ್ವಾತಿ, ಡಿಆರ್ಎಫ್ಒ ಕಿರಣ್ ಪಾಟೀಲ, ರಂಜಿತ್, ರವೀಂದ್ರ ಅಂಕಲಗಿ, ನಾಗೇಶ್, ಗಸ್ತು ಅರಣ್ಯ ಪಾಲಕರಾದ ಮಾರುತಿ, ರಾಜು, ಭರತೇಶ್, ರಾಘವೇಂದ್ರ, ಪಾಂಡುರಂಗ ಕಮತಿ, ಸ್ಥಳೀಯರು ಸೇರಿ 50ಕ್ಕಿಂತಲೂ ಅಧಿಕ ಮಂದಿ ಪಾಲ್ಗೊಂಡಿದ್ದಾರೆ.