ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಿಸರವಾದಿ, ಅರಣ್ಯಸೇನಾನಿ, ನಡೆದಾಡುವ ಕಾಡಿನ ನಿಘಂಟು ಎಂದೇ ಹೆಸರುವಾಸಿಯಾಗಿದ್ದ ಕೆ.ಎಂ. ಚಿಣ್ಣಪ್ಪ(84) ಇಂದು ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಚಿಣ್ಣಪ್ಪ ಅವರು ಪೊನ್ನಂಪೇಟೆಯ ಕುಮಟೂರು ಗ್ರಾಮದ ತಮ್ಮ ಮನೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಮರದ ಕಳ್ಳಸಾಗಣೆ, ಗಾಂಜ ತೋಟ ಮಾಡುವುದು, ಕಾಡುಪ್ರಾಣಿಗಳ ಬೇಟೆ ಇನ್ನಿತರ ಅಪರಾಧ ಕೃತ್ಯಗಳನ್ನು ನಿಯಂತ್ರಣಕ್ಕೆ ತಂದಿದ್ದರು. ವನ್ಯಜೀವನಕ್ಕೆ ಇವರ ಕೊಡುಗೆ ಗಮನಿಸಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದಿದ್ದರು. ನಂತರ ವೈಲ್ಡ್ ಲೈಫ್ ಫಸ್ಟ್ ಅಧ್ಯಕ್ಷರಾಗಿ ಟಿಂಬರ್ ಮಾಫಿಯಾ ವಿರುದ್ಧ ಹೋರಾಡಿದ್ದರು.
1967ರಲ್ಲಿ ಅರಣ್ಯ ಇಲಾಖೆಗೆ ಅರಣ್ಯಾಧಿಕಾರಿಯಾಗಿ ಸೇರಿದವರು, ನಾಗರಹೊಳೆಯ ವಲಯ ಅರಣ್ಯಾಧಿಕಾರಿಯಾಗಿ ಶ್ರಮಿಸಿದ್ದರು. ಅರಣ್ಯದಲ್ಲಿ ಬೆಂಕಿ ಹೊತ್ತಿದರೆ ಆರಿಸುವುದು ಹೇಗೆ ಎಂದು ವಿದ್ಯಾರ್ಥಿಗಳಿಗೆ ಬೋಧಿಸಿದ್ದರು. ಚಿಣ್ಣಪ್ಪ ಅವರ ನಿಧನಕ್ಕೆ ಗಣ್ಯರು, ನೂರಾರು ಪರಿಸರ ಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ.