ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪಕ್ಷಾಂತರ ಚಟುವಟಿಕೆಗಳು ಗರಿಗೆದರಿವೆ. ಇದೀಗ ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ್ ಇವರ ಪುತ್ರಿ, ಮೊಮ್ಮಗ ಮತ್ತು ಬೆಂಬಲಿಗರು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಸದಸ್ಯೆ ಡಾ.ತೇಜಸ್ವಿನಿ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಸಮ್ಮುಖದಲ್ಲಿ ಸೇರ್ಪಡೆ ಕಾರ್ಯಕ್ರಮ ಜರುಗಿತು.
ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ್ ಪುತ್ರಿ ಶ್ರೀಮತಿ ಎಂ.ಪಿ. ಸುಮಾ ವಿಜಯ, ಮೊಮ್ಮಗ ಸಾತ್ವಿಕ್ ವಿಜಯಕುಮಾರ್ ಹಿರೇಮಠ, ಅಳಿಯ ವಿಜಯಕುಮಾರ್ ಬಸವಣ್ಣಯ್ಯ ಹಿರೇಮಠ ಇಂದು ಕಮಲ ಚಿಹ್ನೆಯನ್ನು ಹಿಡಿದಿದ್ದಾರೆ.
ಇದೇ ವೇಳೆ ಪುರಸಭೆ ಮಾಜಿ ಅಧ್ಯಕ್ಷರಾದ ಶ್ರೀಮತಿ ಹಣ್ಣಿ ವೀರಮ್ಮ, ಶ್ರೀಮತಿ ಪವಿತ್ರಾ ರಾಮಸ್ವಾಮಿ, ಯಮುನಪ್ಪ, ಕೋಡಿಹಳ್ಳಿ ಕೊಟ್ರೇಶ್, ಪುರಸಭೆ ಮಾಜಿ ಸದಸ್ಯ ರಾಮಸ್ವಾಮಿ ಚೈತನ್ಯ, ಟಿ.ಎ.ಪಿ.ಸಿ.ಎಂ.ಎಸ್. ಮಾಜಿ ಸದಸ್ಯ ಎಸ್. ಯಮುನೂರಪ್ಪ, ಗ್ರಾಮ ಪಂಚಾಯತಿ ಸದಸ್ಯ ಬಿ.ಎಂ. ಅಭಿಷೇಕ್, ಮುಖಂಡರಾದ ಸುದರ್ಶನ ಶಿಲ್ಪಿ, ಹನುಮಂತು, ಸುರೇಶ್ ಕಾಯಣ್ಣನವರ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಕಿರಣ್ ಕುಮಾರ್ ಲಿಂಗದಹಳ್ಳಿ, ಪತ್ರಕರ್ತೆ ಶ್ರೀಮತಿ ಎಂ.ಪಿ.ಅರುಣ ಮತ್ತು ಸಮಾಜಸೇವಕಿ ಶ್ರೀಮತಿ ಗೀತಾ ದೇಸಾಯಿ ಮೊದಲಾದವರು ಬಿಜೆಪಿಗೆ ಸೇರ್ಪಡೆಯಾದರು.