ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ಆಯವ್ಯಯದ ಪೂರ್ವಭಾವಿ ಸಿದ್ಧತೆಗಳನ್ನು ಫೆ. 7ರಿಂದ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ವಿವಿಧ ಇಲಾಖೆಗಳೊಂದಿಗೆ ಆಯವ್ಯಯ ಪೂರ್ವಭಾವಿ ಸಭೆಗಳನ್ನು ಮುಂದಿನ ವಾರದಿಂದ ನಡೆಸಲಾಗುವುದು ಎಂದರು.
ಕೇಂದ್ರ ಸರಕಾರದಿಂದ ರಾಜ್ಯಕ್ಕೆ ದೊರೆಯಲಿರುವ ಅನುದಾನ ಹಾಗೂ ಸಾಲಗಳ ಆಧಾರದ ಮೇಲೆ ರಾಜ್ಯ ಸರಕಾರದ ಆಯವ್ಯಯದ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ನಾಳೆ ದಿಲ್ಲಿ ಪ್ರವಾಸ: ಆಯವ್ಯಯಕ್ಕೂ ಮುನ್ನ ರಾಜ್ಯದ ಎಲ್ಲಾ ಸಂಸದರೊಂದಿಗೆ ಸಭೆ ಸೇರುವ ವಾಡಿಕೆಯಿದೆ. ಈ ಸಭೆಗೆ ಸಮಯ ನಿಗದಿಯಾಗುತ್ತಿದೆ. ಅಂತರರಾಜ್ಯ ಜಲವಿವಾದಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವ ವಕೀಲರನ್ನೂ ಭೇಟಿಯಾಗಲಿದ್ದು, ಬಹುತೇಕವಾಗಿ ನಾಳೆ ದಿಲ್ಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ ಎಂದು ಸಿಎಂ ತಿಳಿಸಿದರು.