ಹೊಸದಿಗಂತ ಡಿಜಿಟಲ್ ಡೆಸ್ಕ್:
ಅದಾನಿ ಗ್ರೂಪ್ (Adani Group) ವಿರುದ್ಧದ ವಂಚನೆ ಆರೋಪದ ಕುರಿತು ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ಅಗ್ರಹಿಸಿದ್ದು, ಹೀಗಾಗಿ ಲೋಕಸಭೆ (Lok Sabha) ಮತ್ತು ರಾಜ್ಯಸಭೆಯನ್ನು (Rajya Sabha) ಶುಕ್ರವಾರಕ್ಕೆ ಮುಂದೂಡಲಾಯಿತು.
ಚರ್ಚೆಗಾಗಿ ಸದನದ ಬಾವಿಗಿಳಿದ ಕಾಂಗ್ರೆಸ್ ಸೇರಿದಂತೆ ಇತರೆ ಪ್ರತಿಪಕ್ಷಗಳು ಅವಕಾಶ ಕೋರಿ ಪ್ರತಿಭಟನೆ ನಡೆಸಿದ ಬಳಿಕ ಕಲಾಪಗಳನ್ನು ಮುಂದೂಡಲಾಯಿತು.
ಬೆಳಗ್ಗೆಯೇ ಪ್ರತಿಭಟನೆ ಬಳಿಕ ಲೋಕಸಭೆ ಮತ್ತು ರಾಜ್ಯಸಭೆಯನ್ನು ಮಧ್ಯಾಹ್ನ ಎರಡು ಗಂಟೆಗೆ ಮುಂದೂಡಲಾಯಿತು. ಎರಡು ಗಂಟೆಗೆ ಸದನ ಆರಂಭವಾದ ಬಳಿಕ ರಾಜ್ಯಸಭೆ ಸಂಸದ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸೇರಿದ ಎಲ್ಲ ವಿಪಕ್ಷಗಳು ಜಂಟಿ ಸಂಸತ್ತಿನ ಸಮಿತಿ ಅಥವಾ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದವು. ಈ ವೇಳೆ ಉಂಟಾದ ಗದ್ದಲದಿಂದಾಗಿ ಎರಡು ಕಲಾಪಗಳನ್ನು ಮುಂದೂಡಲಾಯಿತು.
ಹಿಂಡೆನ್ಬರ್ಗ್ ವರದಿ ಬಳಿಕ ಷೇರು ಮಾರುಕಟ್ಟೆಯಲ್ಲಿ ಅದಾನಿ ಒಡೆತನದ ಎಲ್ಲ ಕಂಪನಿಗಳ ಷೇರುಗಳ ಮೌಲ್ಯ ತೀವ್ರ ಕುಸಿತ ಕಂಡಿವೆ. ಅದಾನಿ ಕಂಪನಿಗಳ ಎಲ್ಐಸಿ, ಎಸ್ಬಿಐ ಸೇರಿದಂತೆ ಹಲವು ಸಾರ್ವಜನಿಕ ಸಂಸ್ಥೆಗಳು ಬಲವಂತವಾಗಿ ಹೂಡಿಕೆ ಮಾಡಿವೆ. ಭಾರತದ ಹೂಡಿಕೆದಾರರು ಅಪಾಯದಲ್ಲಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಈ ಬಗ್ಗೆ ತನಿಖೆ ನಡೆಯಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ.