July 30, 2026
Thursday, July 30, 2026
spot_img

ಕ್ಲಬ್ ಲೈಸೆನ್ಸ್ ಕೊಡಿಸುವುದಾಗಿ ಪಂಗನಾಮ: ನಕಲಿ ಆಪ್ತ ಕಾರ್ಯದರ್ಶಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಭಾವಿ ರಾಜಕಾರಣಿ ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಸಹಾಯಕ (ಪಿಎ) ಎಂದು ಸುಳ್ಳು ಹೇಳಿಕೊಂಡು ಲಕ್ಷಾಂತರ ರೂಪಾಯಿ ದೋಚಿದ್ದ ಖತರ್ನಾಕ್ ವಂಚಕನನ್ನು ಶಿವಮೊಗ್ಗದ ತುಂಗಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹೇಮಂತ್ ಕುಮಾರ್ ಅಲಿಯಾಸ್ ಗಣೇಶ್ ಎಂದು ಗುರುತಿಸಲಾಗಿದೆ.

15 ಲಕ್ಷ ರೂಪಾಯಿ ಟೋಪಿ ಹಾಕಿದ್ದು ಹೇಗೆ?

ಶಿವಮೊಗ್ಗದ ಕೆಎಚ್‌ಬಿ ಕಾಲೊನಿಯ ರೈತ ಮಂಜುನಾಥ್ ಹಂಜಿ ಎಂಬುವರಿಗೆ ರಿಕ್ರಿಯೇಷನ್ ಕ್ಲಬ್ ಆರಂಭಿಸಲು ಸರ್ಕಾರದ ಪರವಾನಗಿ ಕೊಡಿಸುವುದಾಗಿ ಆರೋಪಿ ಭರವಸೆ ನೀಡಿದ್ದ. ಈ ನೆಪದಲ್ಲಿ ಡಿಜಿಟಲ್ ಫೋನ್ ಪೇ ಮೂಲಕ ಹಾಗೂ ನಗರದ ಸಾಯಿ ಇಂಟರ್‌ನ್ಯಾಷನಲ್ ಹೋಟೆಲ್ ಮತ್ತು ವಡ್ಡಿನಕೊಪ್ಪ ಪ್ರದೇಶಗಳಲ್ಲಿ ನಗದು ರೂಪದಲ್ಲಿ ಹಂತ ಹಂತವಾಗಿ ಒಟ್ಟು 15 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದ.

ನ್ಯಾಯಾಂಗ ಬಂಧನಕ್ಕೆ ಆರೋಪಿ

ಹಣ ಕೈಸೇರಿದ ಬಳಿಕ ಪರವಾನಗಿಯನ್ನೂ ಕೊಡಿಸದೇ, ಹಣವನ್ನೂ ಹಿಂತಿರುಗಿಸದೇ ಆರೋಪಿ ತಲೆಮರೆಸಿಕೊಂಡಿದ್ದ. ಸಂತ್ರಸ್ತ ರೈತ ನೀಡಿದ ದೂರಿನನ್ವಯ ತುಂಗಾನಗರ ಪೊಲೀಸ್ ಠಾಣೆಯಲ್ಲಿ ನೂತನ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಹೆಚ್ಚಿನ ತನಿಖೆ ಮುಂದುವರಿಕೆ

ಆರೋಪಿ ಹೇಮಂತ್ ಕುಮಾರ್ ಇದೇ ರೀತಿಯ ತಂತ್ರ ಬಳಸಿ ಇನ್ಯಾರಿಗಾದರೂ ಹಣ ವಂಚಿಸಿದ್ದಾನೆಯೇ ಎಂಬ ಕೋನದಲ್ಲಿ ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಬಿ. ನಿಖಿಲ್ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !