ಹೊಸದಿಗಂತ ಡಿಜಿಟಲ್ ಡೆಸ್ಕ್
ʼದೇಶದ ಪ್ರತಿಯೊಬ್ಬ ಪ್ರಜೆ ಮುಕ್ತವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಸಂವಿಧಾನ ವಾಕ್ ಸ್ವಾತಂತ್ರ್ಯ ನೀಡಿದೆ. ಆದರೆ, ʼಅವಹೇಳನಕಾರಿ ಹೇಳಿಕೆʼ ಗಳನ್ನು ನೀಡುವವರಿಗೆ ಈ ಕಾಯ್ದೆಯು ರಕ್ಷಣೆ ನೀಡುವುದಿಲ್ಲʼ ಎಂದು ಸ್ಪಷ್ಟವಾಗಿ ಹೇಳಿರುವ ಅಲಹಾಬಾದ್ ಹೈಕೋರ್ಟ್, ಪ್ರಧಾನಿ ಮೋದಿಯವರನ್ನು ಅಸಭ್ಯವಾಗಿ ನಿಂದಿಸಿದ್ದ ವ್ಯಕ್ತಿ ವಿರುದ್ಧ ದಾಖಲಾದ ಎಫ್ಐಆರ್ ರದ್ದುಗೊಳಿಸಲು ನಿರಾಕರಿಸಿದೆ.
ಮೀರ್ಗಂಜ್ ಪ್ರದೇಶದ ಮುಮ್ತಾಜ್ ಮನ್ಸೂರಿ ಎಂಬಾತ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ರನ್ನು ನಾಯಿಗಳು ಎಂದು ಸಂಬೋಧಿಸಿ ಫೇಸ್ಬುಕ್ ಪೋಸ್ಟ್ ಹಂಚಿಕೊಂಡಿದ್ದ ವಿಚಾರವಾಗಿ ದಾಖಲಾದ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಅಶ್ವನಿ ಕುಮಾರ್ ಮಿಶ್ರಾ ಮತ್ತು ರಾಜೇಂದ್ರ ಕುಮಾರ್ ಅವರಿದ್ದ ಪೀಠವು ಈ ಆದೇಶ ಪ್ರಕಟಿಸಿದೆ.
ʼವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದ ಮಾತ್ರಕ್ಕೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಲು ಸಹ ಅವಕಾಶವಿದೆ ಎಂದು ಭಾವಿಸಬೇಡಿ. ದೇಶದ ಪ್ರಧಾನಿಯಾಗಿರಲಿ, ಸಚಿವರಾಗಿರಲಿ ಅವರೂ ಮೂಲತಃ ಭಾರತದ ಪ್ರಜೆಗಳು. ಅಸಭ್ಯ ಹೇಳಿಕೆಗಳಿಂದ ರಕ್ಷಿಸಿಕೊಳ್ಳುವ ಹಕ್ಕನ್ನು ಅವರು ಹೊಂದಿದ್ದಾರೆ. ಈ ಪ್ರಕರಣದ ತನಿಖೆ ಮುಂದುವರೆಸಲು ಅಧಿಕಾರಿಗಳಿಗೆ ಸ್ವಾತಂತ್ರ್ಯವಿದೆʼ ಎಂದು ಹೇಳಿರುವ ನ್ಯಾಯಪೀಠ, ಎಫ್ಐಆರ್ ರದ್ದತಿ ಕೋರಿದ್ದ ಅರ್ಜಿಯನ್ನ ತಳ್ಳಿಹಾಕಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ