ಹೊಸದಿಗಂತ ಡಿಜಿಟಲ್ ಡೆಸ್ಕ್:
“ಕೊನೆಗೂ ಸ್ವಾತಂತ್ರ್ಯ, ಇದು ನಿಜವಾಗಿಯೂ ಸತ್ಯವಾಗಿತ್ತಾ? 200 ವರ್ಷಗಳ ಅಂಧಕಾರ ಕೊನೆಗೂ ಕಳೆದಿತ್ತಾ? ಬ್ರೀಟೀಷರು ತಮ್ಮ ದೊಡ್ಡ ದೊಡ್ಡ ಹಡಗುಗಳಲ್ಲಿ ಇಂಗ್ಲೆಂಡಿಗೆ ವಾಪಸ್ಸಾಗುತ್ತಿದ್ದರು. ನಮ್ಮ ಮುಖದಲ್ಲಿಯೂ, ಯಾವುದಕ್ಕಾಗಿ ಲಕ್ಷಾಂತರ ಜನ ಹೋರಾಡಿ ಪ್ರಾಣ ತೆತ್ತಿದ್ದರೋ ಆ ಸ್ವಾತಂತ್ರ್ಯಸೂರ್ಯ ಅಂತೂ ಉದಯಿಸುತ್ತಿರುವ ಕುರಿತು ಸಂತಸವಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲ ಕ್ರಾಂತಿಕಾರಿ ಹೋರಾಟಗಾರರಿಗೆ, ರಾಷ್ಟ್ರೀಯ ನಾಯಕರಿಗೆ ದೆಹಲಿಯಿಂದ ಕರೆ ಬರುತ್ತದೆ, ಎಲ್ಲರೂ ಸೇರಿ ಭವ್ಯ ಭಾರತದ ಹೊಸಗಾಥೆ ಬರೆಯುತ್ತೇವೆಂದು ಕೊಂಡಿದ್ದೆವು. ದೇಶ ಸ್ವಾತ್ಯಂತ್ರ್ಯವಾಯಿತಲ್ಲ ಇನ್ನಾವುದಕ್ಕೆ ಚಿಂತೆಪಡುವುದು ಎಂದುಕೊಂಡಿದ್ದೆವು. ಆದರೆ ಆ ಕರೆ ಎಂದಿಗೂ ಬರಲೇ ಇಲ್ಲ… ಮುಚ್ಚಿದ ಬಾಗಿಲುಗಳ ನಡುವೆ ಯಾವೆಲ್ಲ ಒಪ್ಪಂದಗಳಿಗೆ ಸಹಿಯಾದವೋ ಒಂದೂ ತಿಳಿಯಲಿಲ್ಲ… ಒಮ್ಮೆಲೇ ಹಿಂದೂ ಮುಸ್ಲಿಮರ ನಡುವೆ ದೇಶ ವಿಭಜನೆಯ ಗಲಾಟೆ ಪ್ರಾರಂಭವಾಗಿಬಿಟ್ಟಿತು… ಕೆಲ ಕ್ರಿಶ್ಚಿಯನ್ನರ ಪ್ರಭಾವದಿಂದ ಹಿಂದೂ ಮುಸ್ಲಿಮರು ಒಬ್ಬರಿಗೊಬ್ಬರನ್ನು ಕತ್ತರಿಸುತ್ತಿದ್ದರು. ಬೀಳುತ್ತಿರುವ ಹೆಣಗಳನ್ನು ಎಣಿಸುವುದಂತೂ ಅಸಾಧ್ಯವಾಗಿತ್ತು. ಆ ಸಂದರ್ಭದಲ್ಲಿ ʼನಾಯಕʼರೆನಿಸಿಕೊಂಡವರು ಏನು ಮಾಡುತ್ತಿದ್ದರು. ಅವರು ಹೇಗೆ ಇದನ್ನು ಒಪ್ಪಿಕೊಂಡರು..?ಇವೆಲ್ಲ ನಡೆಯುತ್ತಿರುವುದು ಒಂದು ಕಡೆಯಾದರೆ, ಇನ್ನೊಂದೆಡೆ ಇಳಿಸಂಜೆಯ ಹೊತ್ತಲಿ ಮೌಂಟ್ ಬ್ಯಾಟನ್ ಶಾಂಪೇನ್ ತೆಗೆದರು.. ನೆಹರು ನಗುತ್ತಾ ಗ್ಲಾಸ್ ಸ್ವೀಕರಿಸಿದರು….”
ʼಸಾಹೆಬ್ಸ್ ಹು ನೆವರ್ ಲೆಫ್ಟ್ ಇಂಡಿಯಾʼ ಎಂಬ ಸಾಕ್ಷ್ಯ ಚಿತ್ರ ತೆರೆದುಕೊಳ್ಳುವುದು ಹೀಗೆ. ಇದುವರೆಗೂ ಹೇಳಿರದ ಇತಿಹಾಸವೊಂದನ್ನು ತೆರದಿಡುತ್ತದೆ ಈ ಡಾಕ್ಯುಮೆಂಟರಿ. ಗುಲಾಮರನ್ನು, ನಿಷ್ಠ ಸೇವಕರನ್ನು ನೇಮಿಸಿಕೊಂಡ ಶೇರ್ ಶಾ ಸೂರಿಯಿಂದ ಆರಂಭಗೊಂಡ ಗುಲಾಮಿ ಮಾನಸಿಕತೆ, ನಂತರದಲ್ಲಿ ದೇಶವನ್ನಾಕ್ರಮಿಸಿಕೊಂಡು ಬ್ರಿಟೀಷರವರೆಗೂ ಮುಂದುವರೆದು ಕೊನೆಗೆ ಸ್ವಾತಂತ್ರ್ಯ ಬಂದು ದೇಶ ವಿಭಜನೆಗೆ ನಾಂದಿಯಾಗಿದ್ದು ಹೇಗೆ ಎಂಬುದನ್ನು ಈ ಸಾಕ್ಷ್ಯಚಿತ್ರ ಕಟ್ಟಿಕೊಡುತ್ತದೆ.
ಸಾವಿರಾರು ವರ್ಷಗಳ ದಾಳಿಕೋರರ ಆಕ್ರಮಣಗಳಿಗೆ ಬಗ್ಗದ ಭಾರತವು ಹೇಗೆ ನಮ್ಮದೇ ನಾಯಕರೆನಿಸಿಕೊಂಡವರಿಂದ ಸೋಲೊಪ್ಪಿಕೊಂಡಿತು. ಪರಕೀಯರ ಮೋಡಿಗಳಿಗೆ ಒಳಗಾಗಿ ಸ್ವಹಿತಾಸಕ್ತಿಗೋಸ್ಕರ ನಾಯಕರೆನಿಸಿಕೊಂಡವರು ತಮ್ಮನ್ನೇ ಮಾರಿಕೊಂಡು ದೇಶವಿಭಜನೆಯ ದುರಂತಕ್ಕೆ ಹೇಗೆ ಕಾರಣರಾದರು ಎಂಬುದರ ಕುರಿತು ನಮ್ಮಲ್ಲಿ ಬಹುತೇಕರಿಗೆ ತಿಳಿದಿಲ್ಲದ ಇತಿಹಾಸದ ಸತ್ಯಗಳೇ ಈ ಸಾಕ್ಷ್ಯಚಿತ್ರದ ಆಧಾರ. ನಾಡಿನ ಖ್ಯಾತ ಸಾಹಿತಿಗಳಾದ ಎಸ್.ಎಲ್. ಭೈರಪ್ಪ, ಪ್ರಸಿದ್ಧ ಇತಿಹಾಸಕಾರರಾದ ಸಂದೀಪ ಬಾಲಕೃಷ್ಣ ಮುಂತಾದ ಕನ್ನಡಿಗರೂ ಈ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಒಟ್ಟೂ 10 ಸಾಕ್ಷ್ಯಚಿತ್ರಗಳ ಸರಣಿಯಲ್ಲೀಗ ಮೊದಲನೇಯದು ಯೂಟ್ಯೂಬಿನಲ್ಲಿ ಪ್ರಾಚ್ಯಂ ಎಂಬ ಚಾನೆಲ್ಲಿನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಎರಡು ದಿನಗಳಲ್ಲೇ ಮನ್ನಣೆ ಗಳಿಸುತ್ತಿದ್ದು ದೇಶ ವಿಭಜನೆಯ ಕರಾಳ ಸತ್ಯದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕೆಂದಿದ್ದರೆ ವೀಕ್ಷಿಸಲೇ ಬೇಕಾದ ಚಿತ್ರ ʼಸಾಹೆಬ್ಸ್ ಹು ನೆವರ್ ಲೆಫ್ಟ್ ಇಂಡಿಯಾʼ.