ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜ ಪೇಟೆಯ ಈದ್ಗಾ ಮೈದಾನದಲ್ಲಿ ಪೊಲೀಸ್ ಬಂದೋಬಸ್ತ್ ಇನ್ನಷ್ಟು ಹೆಚ್ಚಿಸಲಾಗಿದೆ. ಮೈದಾನ ಕಂದಾಯ ಇಲಾಖೆ ಸ್ವತ್ತು ಎಂಬುದಾಗಿ ಬಿಬಿಎಂಪಿ ಘೋಷಿಸಿದ ಬೆನ್ನಲ್ಲೇ ನಡೆದ ಕೆಲವು ಸಂಭ್ರಮಾಚರಣೆಗಳ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಘೋಷಿಸಿದ ಬೆನ್ನಲ್ಲೇ, ಆ. 15ರಂದು ಈ ಮೈದಾನದಲ್ಲಿ ಧ್ವಜ ಹಾರಿಸುತ್ತೇವೆ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಹೇಳಿತ್ತು. ಅಲ್ಲದೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಇಲ್ಲಿ ಆಗಮಿಸಿ ಧ್ವಜಾರೋಹಣ ಮಾಡಲಿ ಎಂದೂ ಹೇಳಿತ್ತು.
ಈ ಎಲ್ಲಾ ಬೆಳವಣಿಗೆಗಳಿಂದ ಮುಸ್ಲಿಂ ಸಮುದಾಯದಿಂದ ಆಕ್ಷೇಪ ವ್ಯಕ್ತವಾಗಿದ್ದು, ಶಾಂತಿ ಕದಡದಂತೆ ಪೊಲೀಸ್ ಕಣ್ಗಾವಲು ಹೆಚ್ಚಿಸಲಾಗಿದೆ.