ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಲ್ಲಿ ಈಗಾಗಲೇ ಎರಡು ಮೂರು ಶಕ್ತಿಗಳು ಕೆಲಸ ಮಾಡುತ್ತಿವೆ. ಖರ್ಗೆ ಅಧ್ಯಕ್ಷರಾದರೆ ಗಾಂಧಿ ಕುಟುಂಬದ ಕೈ ಗೊಂಬೆಯಾಗಿ ಕೆಲಸ ಮಾಡುತ್ತಾರೆ, ಸ್ವತಂತ್ರವಾಗಿ ಅವರಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ವ್ಯಂಗ್ಯವಾಡಿದರು.
ಭಾನುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖರ್ಗೆ ಅಧ್ಯಕ್ಷರಾದರೇ ಕರ್ನಾಟಕದಲ್ಲಿ ಕಾಂಗ್ರೆಸ್ ಮೂರನೇ ಬಣ ಉದಯವಾಗುತ್ತದೆ. ಸಿದ್ದರಾಮಯ್ಯ ಗುಂಪು, ಡಿಕೆ ಶಿವಕುಮಾರ್ ಗುಂಪು ಜೊತೆಗೆ ಖರ್ಗೆಯವರ ಗುಂಪು ಉದಯವಾಗುತ್ತದೆ ಎಂದರು.
ಕಾಂಗ್ರೆಸಿಗೆ ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕತೆ ಇಲ್ಲ. ಕಾಂಗ್ರೆಸ್ 5 ಜಿ ವೇಗದಲ್ಲಿ ಭ್ರಷ್ಟಾಚಾರ ಮಾಡಿದೆ. ಭ್ರಷ್ಟಾಚಾರ ಕಾಂಗ್ರೆಸಿನ ಟ್ರೇಡ್ ಮಾರ್ಕ್. ಭ್ರಷ್ಟಾಚಾರ ಮಾಡಿ ಕಾಂಗ್ರೆಸ್ ನಾಯಕರು ಜಾಮೀನಿನ ಮೇಲೆ ಇದ್ದಾರೆ. ಭ್ರಷ್ಟಾಚಾರದ ಬಗ್ಗೆ ಟಿ-ಶರ್ಟ್ ಗಳನ್ನು ಹಾಕಿಕೊಂಡು ನಾಟಕ ಮಾಡುತ್ತಿದ್ದಾರೆ, ಯಾವುದೇ ವಿಚಾರ ಸ್ಪಷ್ಟತೆ ಇಲ್ಲದೆ ಭಾರತ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಈ ದೇಶದಲ್ಲಿ ಎರಡು ಧ್ವಜದ ಸಂಸ್ಕೃತಿ ಮಾಡಿದ್ದು ಕಾಂಗ್ರೆಸ್. ಭಾರತಕ್ಕೊಂದು ಧ್ವಜ ಕಾಶ್ಮೀರಕ್ಕೊಂದು ಧ್ವಜ ಮಾಡಿದ್ದು ಕಾಂಗ್ರೆಸ್. ಭಾರತ ಜೋಡೋ ಅನ್ನುವ ಶಬ್ದಕ್ಕೂ ಕಾಂಗ್ರೆಸಿಗೂ ಸಂಬಂಧವೇ ಇಲ್ಲ. ಕಾಂಗ್ರೆಸ್ ಮೊದಲು ತಮ್ಮ ಕಾರ್ಯಕರ್ತರನ್ನು ಜೋಡಿಸಲಿ ಎಂದರು.
ವಿದ್ಯುತ್ ದರ ಏರಿಕೆ ವಿಚಾರ
2014ರಲ್ಲಿ ಕಲ್ಲಿದ್ದಲಿನ ಬೇರೆಯ ಹೊಂದಾಣಿಕೆ ಗೋಸ್ಕರ ನಿಯಮಾವಳಿ ರೂಪಿಸಲಾಗಿತ್ತು. ಹಿಂದಿನ ನಿಯಮಾವಳಿಯೇ ಮುಂದುವರಿಯುತ್ತಿದ್ದು, ನಮ್ಮ ಸರ್ಕಾರ ಯಾವುದೇ ಹೊಸ ನಿಯಮಾವಳಿ ಮಾಡಿಲ್ಲ. ಈ ನಿಯಮಾವಳಿ ಬಗ್ಗೆ ಮರುಚಿಂತನೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಕಾಂಗ್ರೆಸ್ ತಂದ ಈ ಪದ್ಧತಿಯಿಂದ ಜನರಿಗೆ ಹೊರೆಯಾಗುತ್ತಿದೆ. ಸಾಧಕ ಬಾದಕಗಳ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ, ಅಗತ್ಯ ಬಿದ್ದರೆ ಈ ನಿಯಮಾವಳಿ ಹಿಂದಕ್ಕೆ ಪಡೆಯಲು ಹಿಂಜರಿಯುವುದಿಲ್ಲ ಎಂದು ಹೇಳಿದರು.