ಹೊಸದಿಗಂತ ಡಿಜಿಟಲ್ ಡೆಸ್ಕ್ :
ಉತ್ತರ ಪ್ರದೇಶ ಸ್ಪೆಷಲ್ ಟಾಸ್ಕ್ ಫೋರ್ಸ್ (STF) ಸಿಬ್ಬಂದಿ ಇಂದು ಝಾನ್ಸಿಯಲ್ಲಿ ಎನ್ಕೌಂಟರ್ನಲ್ಲಿ ಉಮೇಶ್ ಪಾಲ್ ಹತ್ಯೆ ಕೇಸ್ನಲ್ಲಿ ಆರೋಪಿಯಾಗಿದ್ದ ಅಸಾದ್ ಅಹ್ಮದ್ನನ್ನು ಹತ್ಯೆ ಮಾಡಿದ್ದಾರೆ.
ಇವನೊಂದಿಗೆ ಗುಲಾಮ್ ಎಂಬಾತನನ್ನೂ ಕೊಲ್ಲಲಾಗಿದೆ. ಪುತ್ರ ಅಸಾದ್ ಅಹ್ಮದ್ನನ್ನು ಕಳೆದುಕೊಂಡ ಗ್ಯಾಂಗ್ಸ್ಟರ್-ರಾಜಕಾರಣಿ ಅತೀಕ್ ಅಹ್ಮದ್ ಒಂದೆಡೆ ಗೋಳಾಡುತ್ತಿದ್ದಾನೆ. ಮತ್ತೊಂದೆಡೆ ಆತನನ್ನು ಕೊಂದು ಹಾಕಿದ ಉತ್ತರ ಪ್ರದೇಶ ಪೊಲೀಸರನ್ನು ಸಿಎಂ ಯೋಗಿ ಆದಿತ್ಯನಾಥ್ ಹೊಗಳಿದ್ದಾರೆ.
2005ರಲ್ಲಿ ಬಹುಜನ ಸಮಾಜ ಪಾರ್ಟಿಯ ಶಾಸಕ ರಾಜು ಪಾಲ್ ಹತ್ಯೆಯಾಗಿತ್ತು. ಅವರ ಕೊಲೆ ಕೇಸ್ನಲ್ಲಿ ಸಮಾಜವಾದಿ ಪಕ್ಷದ ಸಂಸದನಾಗಿದ್ದ ಅತೀಕ್ ಅಹ್ಮದ್ ಆರೋಪ ಸಾಬೀತಾಗಿ ಆತ 2017ರಲ್ಲೇ ಜೈಲುಪಾಲಾಗಿದ್ದಾನೆ. ರಾಜುಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಎಂಬುವರನ್ನು 2006ರಲ್ಲಿ ಅಪಹರಣ ಮಾಡಿದ ಆರೋಪದಡಿ ಈ ಅತೀಕ್ ಅಹ್ಮದ್ಗೆ ಇತ್ತೀಚೆಗೆ ಪ್ರಯಾಗ್ರಾಜ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಜೈಲಲ್ಲಿರುವ ಅತೀಕ್ಗೆ ಸ್ವತಃ ಎನ್ಕೌಂಟರ್ ಆಗುವ ಭಯ ಕಾಡುತ್ತಲೇ ಇದ್ದು, ಅದನ್ನವನು ಬಹಿರಂಗವಾಗಿ ಹೇಳಿಕೊಂಡಿದ್ದಾನೆ. ಆದರೆ ಈಗ ಅವರ ಮಗನನ್ನೇ ಯುಪಿ ಪೊಲೀಸರು ಎನ್ಕೌಂಟರ್ ಮಾಡಿ ಹತ್ಯೆ ಮಾಡಿದ್ದಾರೆ.
ಉಮೇಶ್ ಪಾಲ್ ಕೊಲೆ ಕೇಸ್ನಲ್ಲಿ ಆರೋಪಿಗಳಾಗಿದ್ದ ಅರ್ಬಾಜ್ ಖಾನ್ ಮತ್ತು ವಿಜಯ್ ಚೌಧುರಿ ಅಲಿಯಾಸ್ ಉಸ್ಮಾನ್ನ್ನು ಈ ಹಿಂದೆಯೇ ಎನ್ಕೌಂಟರ್ ಮಾಡಲಾಗಿದೆ. ಅದರೊಂದಿಗೆ ಈಗ ಅಸಾದ್ ಮತ್ತು ಗುಲಾಮ್ನನ್ನು ಉತ್ತರ ಪ್ರದೇಶ ಸ್ಪೆಷಲ್ ಟಾಸ್ಕ್ ಫೋರ್ಸ್ ಸಿಬ್ಬಂದಿ ಕೊಂದಿದ್ದಾರೆ.
ಅಸಾದ್ ಮತ್ತು ಗುಲಾಮ್ ಎನ್ಕೌಂಟರ್ ಮಾಡಿದ ಉತ್ತರ ಪ್ರದೇಶ ಪೊಲೀಸ್ ಸ್ಪೆಶಲ್ ಟಾಸ್ಕ್ ಫೋರ್ಸ್ನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೊಗಳಿದ್ದಾರೆ. ‘ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಅವರು ಶ್ರಮಿಸುತ್ತಿರುವುದು ಶ್ಲಾಘನೀಯ’ ಎಂದಿದ್ದಾರೆ.
ಎನ್ಕೌಂಟರ್ನ ಸಂಪೂರ್ಣ ವಿವರವನ್ನು ರಾಜ್ಯ ಗೃಹ ಇಲಾಖೆ ಮುಖ್ಯಕಾರ್ಯದರ್ಶಿ ಸಂಜಯ್ ಪ್ರಸಾದ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ ಉತ್ತರ ಪ್ರದೇಶ ಎಸ್ಟಿಎಫ್, ಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ವಿಶೇಷ ಡಿಜಿ ಸೇರಿ ಇಡೀ ಪೊಲೀಸ್ ತಂಡದ ಬಗ್ಗೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.