ಹೊಸದಿಗಂತ ಶಿವಮೊಗ್ಗ:
ಇಬ್ಬರನ್ನು ಕೊಚ್ಚಿ ಕೊಲೆ ಮಾಡಿ ಬಳಿಕ ತಲೆ ಮೇಲೆ ಕಲ್ಲುಚಪ್ಪಡಿ ಎತ್ತಿ ಹಾಕಿ ಪರಾರಿಯಾಗಿರುವ ಘಟನೆ ನಗರದ ಲಷ್ಕರ್ ಮೊಹಲ್ಲಾದಲ್ಲಿ ಬುಧವಾರ ಸಂಜೆ ನಡೆದಿದೆ.
ಕೆ.ಆರ್.ಪುರಂ ನಿವಾಸಿ ಸುಹೇಲ್ ಯಾನೆ ಸೇಬು (32) ಶೋಯಬ್(30) ಕೊಲೆಗೀಡಾಗಿದ್ದು, ಇವರಿಬ್ಬರ ಮೇಲೂ ಕೆಲವೊಂದು ಪ್ರಕರಣಗಳು ದಾಖಲಾಗಿದ್ದವು. ಇವರಿಬ್ಬರೂ ಬೈಕ್ನಲ್ಲಿ ಲಷ್ಕರ್ ಮೊಹಲ್ಲಾಕ್ಕೆ ಬರುತ್ತಿದ್ದಾಗ, ಅಲ್ಲಿನ ನಿವಾಸಿಗಳಿಬ್ಬರು ಮಾರಾಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿದ್ದಾರೆ. ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾರೆ.
ಕೊಲೆಯಾದ ಇಬ್ಬರು ಲಷ್ಕರ್ ಮೊಹಲ್ಲಾದವರ ಜತೆ ಮಂಗಳವಾರ ಜಗಳವಾಡಿಕೊಂಡಿದ್ದರು. ಈ ಇಬ್ಬರು ತಮ್ಮ ಮೇಲೆ ಹಲ್ಲೆ ನಡೆಸಲು ಬಂದಿದ್ದಾರೆಂದು ಭಾವಿಸಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಗಾಂಧಿಬಜಾರ್ ವ್ಯಾಪ್ತಿಯಲ್ಲಿಯೇ ಲಷ್ಕರ್ಮೊಹಲ್ಲಾ ಇದ್ದು, ಇದು ಮಾರುಕಟ್ಟೆ ಪ್ರದೇಶವಾಗಿರುವುದರಿಂದ ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಇಂತಹ ಜನ ಸಂದಣಿ ಸ್ಥಳದಲ್ಲಿ ಏಕಾಏಕಿ ದಾಳಿ ನಡೆಸಿ ಅಮಾನವೀಯವಾಗಿ ಕೊಲೆ ಮಾಡಿರುವುದನ್ನು ನೋಡಿದ ಜನ ಬೆಚ್ಚಿಬಿದ್ದಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಕೆಲವರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು.
ತಕ್ಷಣವೇ ಕೋಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳ ಮಹಜರು ನಡೆಸಿ ಮೃತದೇಹಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಿದರು. ಸ್ಥಳಕ್ಕೆ ಜಿಲ್ಲಾ ರಕ್ಷಣಾಕಾರಿ ಜಿ.ಕೆ. ಮಿಥುನ್ ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.