ಹೊಸದಿಗಂತ ವರದಿ, ಉಡುಪಿ:
ಹೈದರಾಬಾದಿನಿಂದ ಉಡುಪಿ ಜಿಲ್ಲೆಯ ಮಣಿಪಾಲ, ಮಲ್ಪೆ ಸೇರಿದಂತೆ ವಿವಿಧೆಡೆಗೆ ಸಾಗಾಟ ಮಾಡಲು ತರುತ್ತಿದ್ದ ಗಾಂಜಾವನ್ನು ಶನಿವಾರ ಉಡುಪಿ ಸೆನ್ ಅಪರಾಧ ಪೋಲಿಸರು ಕಾರ್ಯಚರಣೆ ನಡೆಸಿ ಬರೋಬ್ಬರಿ 6,09,000 ರೂ ಮೌಲ್ಯದ 20 ಕೆಜಿ 614 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರಿನ ವಿಜಯಕುಮಾರ್ ಎಸ್ (23), ನಿಕ್ಷೇಪ್ ಎಸ್ ವಿ (24), ನಿತೇಶ್ ಕುಮಾರ್ (24) ಎಂದು ಗುರುತಿಸಲಾಗಿದೆ.
ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕರಾದ ಮಂಜುನಾಥ ಇವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕಾರ್ಯಚರಣೆ ನಡೆಸಿ ಹೆಬ್ರಿ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರನ್ನು ಪೆರ್ಡೂರು ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ತಡೆದು ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ.
ಆರೋಪಿಗಳಿಂದ ಮೂರು ಮೊಬೈಲ್, ಒಂದು ಕಾರು ಸೇರಿದಂತೆ ಒಟ್ಟು 15,30,000 ರೂ ಗಳ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.