ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಸಮಸ್ಯೆಯಿಂದ ಹೈರಾಣಾದ ಜನರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಮಳೆ ನಿಂತು ಹೋದ ಮೇಲೆ ಕಸದ ರಾಶಿ ರಸ್ತೆಗೆ ಬಂದು ಬಿದ್ದಿದ್ದು, ವಿಲೇವಾರಿ ಆಗುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ.
ಮಳೆ ನಡುವೆಯೇ ಕಸವನ್ನ ಡಂಪ್ ಮಾಡಲು ಹೋಗಿದ್ದ ಲಾರಿಗಳು ಗುಂಡಿಗಳಲ್ಲಿ ಹೋತು ಹೋಗಿದ್ದು, ನಾಲ್ಕೈದು ದಿನಗಳಿಂದಲೂ ಕಸದ ಲಾರಿಗಳು ನಗರಕ್ಕೆ ವಾಪಾಸಾಗಿಲ್ಲ. ಹೀಗಾಗಿ ನಗರದೆಲ್ಲಡೆ ಕಸದ ಸಮಸ್ಯೆ ತಾಂಡವವಾಡುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
ಬೆಂಗಳೂರಿನ ಕಸ ವಿಲೇವಾರಿ ಮಾಡಲು ನಗರದಲ್ಲಿ ಇರುವುದು ಒಂದೇ ಒಂದು ವಾರ್ಡ್. ಅದು ಕೋಗಿಲು ಕ್ರಾಸ್ನಲ್ಲಿರುವ ಬೆಳ್ಳಳ್ಳಿ ಘಟಕ. ಎಷ್ಟೇ ಕಸವಿದ್ದರೂ ಈ ಘಟದಲ್ಲಿಯೇ ಕಸ ವಿಲೇವಾರಿ ಮಾಡಲಾಗುತ್ತದೆ. ಆದರೆ ಕಳೆದ ಒಂದು ವಾರದ ಮಳೆಯಿಂದಾಗಿ ಕಸದ ಯಾರ್ಡ್ನಲ್ಲಿ ಅಡಿಗಳಷ್ಟು ಆಳದ ಗುಂಡಿ ನಿರ್ಮಾಣವಾಗಿದ್ದು, ಗುಂಡಿಗಳಲ್ಲಿ ಹತ್ತಾರು ಲಾರಿಗಳು ಹೋತು ಹೋಗಿವೆ.
ಇವುಗಳನ್ನು ಹೊರತೆಗೆಯುವುದೇ ದೊಡ್ಡ ಸಮಸ್ಯೆಯಾಗಿ ಹೋಗಿದೆ. ಇನ್ನು ಈ ಮಧ್ಯೆ ನಾಲ್ಕು ದಿನಗಳಿಂದ ವಿಲೇಯಾಗದೇ ಕಸ ಹಾಗೇಯೇ ಉಳಿದಿದ್ದು 10-12 ಸಾವಿರ ಮೆಟ್ರಿಕ್ ಟನ್ ಕಸ ಉಳಿದೆದೆ. ಈ ಎಲ್ಲಾ ಕಸ ವಿಲೇಯಾಗಲು ಕನಿಷ್ಠ ವಾರವಾದರೂ ಸಮಯ ಬೇಕಾಗಿದೆ. ಯಾಕೆಂದರೆ ಕಸ ವಿಲೇವಾರಿಗೆ ಬೆಳ್ಳಳ್ಳಿ ಬಿಟ್ಟರೆ ಕಸ ವಿಲೇಗೆ ಬಿಬಿಎಂಪಿಗೂ ಬೇರೆ ಜಾಗವಿಲ್ಲ. ಹೀಗಾಗಿ ನಗರದೆಲ್ಲಡೆ ಕಸದ ಸಮಸ್ಯೆ ಎದುರಾಗಿದೆ. ಶೀಘ್ರ ಈ ಸಮಸ್ಯೆಗೆ ಪರಿಹಾರ ಸಿಗಲಿ ಎಂದು ಜನ ಬಿಬಿಎಂಪಿಯತ್ತ ಎದುರು ನೋಡುತ್ತಿದ್ದಾರೆ.