ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ನೈಋತ್ಯ ರೈಲ್ವೆಯು ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಕುರಿತು ಜಾಗೃತಿ ಮೂಡಿಸಲು ಆಕೃತಿಯೊಂದನ್ನು ಮಾಡಿದ್ದು, ಇದು ಪ್ರಧಾನಿ ಮೋದಿ ಅವರ ಗಮನ ಸೆಳೆದಿದೆ.
ಕೆಎಸ್ಆರ್ ರೈಲು ನಿಲ್ದಾಣದ ಸಿಬ್ಬಂದಿ ಸೋಮವಾರ ರೈಲು ನಿಲ್ದಾಣದ ಸುತ್ತಮುತ್ತ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಆಕೃತಿವೊಂದನ್ನು ತಯಾರಿಸಿದ್ದಾರೆ. ಕಳೆದ 12 ಗಂಟೆಗಳಲ್ಲಿ ಎಸೆಯಲ್ಪಟ್ಟಿದ್ದ ತ್ಯಾಜ್ಯದಿಂದ ಈ ಆಕೃತಿ ಮಾಡಲ್ಪಟ್ಟಿದೆ. ಸಾವಿರಾರು ಪ್ಲಾಸ್ಟಿಕ್ ಬಾಟಲಿಗಳಿಂದ ಆಕೃತಿ ತಯಾರಾಗಿದೆ.
ನಿಲ್ದಾಣದ ಪ್ರವೇಶ ದ್ವಾರದಲಲಿಯೇ ಈ ದೈತ್ಯ ಶಿಲ್ಪ ನಿಂತಿದ್ದು, ಕೇವಲ 12 ಗಂಟೆಯಲ್ಲಿ ಎಷ್ಟು ಪ್ಲಾಸ್ಟಿಕ್ ಎಸೆಯಲಾಗಿದೆ ಎನ್ನುವುದಕ್ಕೆ ನಿದರ್ಶನವಾಗಿದೆ. ಸಾರ್ವಜನಿಕರ ಗಮನ ಸೆಳೆಯುವ ಜತೆ ತ್ಯಾಜ್ಯದ ವಿಲೇವಾರಿ ಸಂದೇಶವನ್ನು ಈ ಆಕೃತಿ ನೀಡುತ್ತಿದೆ.
ಪ್ರಧಾನಿ ಮೋದಿ ಈ ಬಗ್ಗೆ ಮಾತನಾಡಿದ್ದು, ಇದು ಶ್ಲಾಘನೀಯ ಪ್ರಯತ್ನ ಎಂದಿದ್ದಾರೆ. ಇಂತಹ ನವೀನ ಮತ್ತು ಶ್ಲಾಘನೀಯ ಪ್ರಯತ್ನಗಳು ನಡೆಯಲಿ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳೋಣ. ಮೂಲಭೂತ ನಾಗರಿಕ ಕರ್ತವ್ಯವನ್ನು ನಿಭಾಯಿಸೋಣ ಎಂದಿದ್ದಾರೆ.