ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನದ ಬೆಲೆ ಏರಿಕೆಯಿಂದ ಕಳೆದ 11 ವರ್ಷಗಳಿಂದ ಹೆಣ್ಣುಮಕ್ಕಳು ಮಾಂಗಲ್ಯ ಸರ ಕಟ್ಟಿಕೊಳ್ಳಲು ಆಗುತ್ತಿಲ್ಲ. ಗ್ರಾಮ್ಗೆ 40 ಸಾವಿರ ರೂ. ಇದ್ದ ಚಿನ್ನದ ಬೆಲೆ 90 ಸಾವಿರ ರೂ. ಆಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ಕೇಂದ್ರ ಸರ್ಕಾರ ಗ್ಯಾಸ್ ಬೆಲೆ ಏರಿಕೆ ಮಾಡಿದ್ದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ‘ಕೈ’ ನಾಯಕರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, 10 ಸಾವಿರ ರೂ. ಇದ್ದ ಒಂದು ಮೊಬೈಲ್ ಬೆಲೆ 30 ಸಾವಿರ ರೂ. ಆಗಿದೆ. ಹಾಗೇ ಸಿಮೆಂಟ್ ಮತ್ತು ಉಸುಕಿನ ಬೆಲೆಯನ್ನೂ ಏರಿಕೆ ಮಾಡಿದೆ. ಟೂತ್ ಪೇಸ್ಟ್ 5 ರೂಪಾಯಿ ಇದ್ದದ್ದು 15 ರೂ. ಆಗಿದೆ. 268 ರೂ. ಇದ್ದ ಒಂದು ಮೂಟೆ ಸಿಮೆಂಟ್ ಬೆಲೆ 460 ರೂ. ಆಗಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ನಮ್ಮದು ರೈತರು, ಕಾರ್ಮಿಕರ ಪರವಾಗಿ ಇರುವ ಸರ್ಕಾರ. ರೈತರಿಗಾಗಿ ನಾವು ಹಾಲಿನ ದರ 4 ರೂ. ಏರಿಕೆ ಮಾಡಿದ್ದೇವೆ. ಹರಿಯಾಣ, ಅಸ್ಸಾಂ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಪಂಜಾಬ್ಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ ಎಂದು ತಿಳಿಸಿದರು.